ಹೊಸದಿಗಂತ ವರದಿ ಕಲಬುರಗಿ:
ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ ಮೂಲಕ ನಾಡಿನ ಜನರಿಗೆ ಸುಳ್ಳು ಸಂದೇಶ ನೀಡಲು ಹೊರಟಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ,ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಭಾರತವನ್ನು ವಿಭಜನೆ ಮಾಡಿ,ಇದೀಗ ಜೋಡೋ ಯಾತ್ರೆಯೆಂದರೆ ಜನರು ನಂಬುವುದು ಅಸಾಧ್ಯವಾದ ಮಾತು.ಯಾತ್ರೆಯ ಮೂಲಕ ಜನರಿಗೆ ತಪ್ಪು ಸಂದೇಶವನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಂವಿಧಾನ ಗೊತ್ತಿದೆಯಾ ?,ಸಿದ್ದರಾಮಯ್ಯ ಮಾತ್ರ ಬುದ್ದಿವಂತರಾ ?,ಸಿದ್ದರಾಮಯ್ಯ ಮಾತ್ರ ಪ್ರಭುದ್ಧರಾ ಎಂದು ಪ್ರಶ್ನಿಸಿದ ಅವರು,70 ವಷ೯ದ ಆಡಳಿತದಲ್ಲಿ ಜನರನ್ನು ಕೇವಲ ಓಟ್ ಬ್ಯಾಂಕ್,ಗಳನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಕಾಲಾತೀಥವಾಗಿ ಹೋಗಿದೆ.
ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ ಅವರು, ಹಿಂದೂಳಿದ ವಗ೯ದ ಎಷ್ಟು ಜನರಿಗೆ ಸಾಮಾಜಿಕ ನ್ಯಾಯ ನೀಡಿದೆ ಎಂದು ಉತ್ತರಿಸಲಿ ಎಂದ ಅವರು, ಸಾಮಾಜಿಕ ನ್ಯಾಯವಿರುವುದು ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ. ಹೀಗಾಗಿಯೇ ಕೇಂದ್ರ ಸರ್ಕಾರದ ಲ್ಲಿ 50 ಜನ ಎಸ್ಸಿ,ಎಸ್ಟಿ,ಯವರು ಸಚಿವರಿದ್ದಾರೆ ಎಂದರು.
ಅಹಂಕಾರದ ಮಾತುಗಳು ಯಾರಿಗೂ ಶೋಭೆ ತರುವುದಿಲ್ಲ. ಕಾಂಗ್ರೆಸ್ ಪಕ್ಷದ ಹಿಂದೆ ಯಾವ ಸಮುದಾಯವು ಉಳಿದಿಲ್ಲ. ಬರುವಂತಹ ದಿನಗಳಲ್ಲಿ ಅಲ್ಪಸ್ವಲ್ಪ ಅಲ್ಪಸಂಖ್ಯಾತ ಸಮುದಾಯ ಉಳಿದಿದ್ದು,ಅದು ಅವರಿಂದ ದೂರವಾಗಲಿದೆ ಎಂದರು.