ಹೊಸದಿಗಂತ ಡಿಜಿಟಲ್ ಡೆಸ್ಕ್;
ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಮತ್ತು ಪ್ರಕರಣದ ಬಳಿಕ ಪೋಕ್ಸೋ ಕೇಸ್ ಹಾಕಿದ್ದ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಘಟನೆ ಕುರಿತು ವರದಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದ್ವೇಷಕ್ಕಾಗಿ ಒತ್ತಡ ಹೇರಿ ನಿರ್ವಾಹಕನ ಮೇಲೆ ಪೋಕ್ಸೋ ಕೇಸ್ ಹಾಕಿಸಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಪೋಕ್ಸೋ ಕೇಸ್ ಸರಿ ಇಲ್ಲ ಎಂದಿದ್ದರು. ಈಗ ವಾಪಸ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿಗೆ ಹೋಗಿದ್ದೆ, ನಿರ್ವಾಹಕನ ಆರೋಗ್ಯ ವಿಚಾರಿಸಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ 509 ಬಸ್ಸುಗಳು ಓಡಾಡುತ್ತಿವೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 130 ಬಸ್ಗಳು ಓಡಾಡ್ತಿವೆ. ನಮ್ಮಲ್ಲಿ ಒಂದು ಬಸ್ಗೆ ಮಸಿ ಬಳಿದಿದ್ದಾರೆ. ಅದಾದ ಬಳಿಕ ಕನ್ನಡ ಸಂಘಟನೆಗಳು ಮಸಿ ಬಳಿದಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಬಸ್ಗಳ ಮೇಲೆ ಮಸಿ ಬಳಿಯುವುದು, ನಿರ್ವಾಹಕನಿಗೆ ಮಸಿ ಬಳಿಯುವುದು ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಗಮನಕ್ಕೆ ಎಲ್ಲವನ್ನೂ ತಂದಿದ್ದೇನೆ ಎಂದರು.
ಸದ್ಯ ಮಹಾರಾಷ್ಟ್ರಕ್ಕೆ ನಮ್ಮ ರಾಜ್ಯದಿಂದ ಬಸ್ ಹೋಗ್ತಿಲ್ಲ, ಅಲ್ಲಿನ ಸಿಎಸ್, ಡಿಜಿಪಿ ಜೊತೆ ನಮ್ಮ ಸಿಎಸ್ ಮಾತನಾಡಿದ ಬಳಿಕ ಮಹಾರಾಷ್ಟ್ರಕ್ಕೆ ಬಸ್ ಬಿಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.