ಹೊಸದಿಗಂತ ವರದಿ ಬೆಳಗಾವಿ:
ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿರುವುದರಿಂದ ರೋಸಿ ಹೋಗಿರುವ ರೈತರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ಹೊರ ಹಾಕಿದರು.
ನೇಗಿಲಯೋಗಿ ರೈತ ಸೇವಾ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಹೆಸ್ಕಾಂ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕೃಷಿ ಪಂಪಸೆಟ್ ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು, ರೈತರ ಎಲ್ಲ ಸಾಲ ವಸೂಲಿಯಾತಿ ನಿಲ್ಲಿಸಬೇಕು, ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು. ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ್, ಜಿಲ್ಲಾ ಸಂಚಾಲಕ ಮಲ್ಲಪ್ಪ ತಳವಾರ, ರಾಜ್ಯ ಉಪಾಧ್ಯಕ್ಷರಾದ ನೇಲವ್ವ ಶಿಂತ್ರಿ, ಕಲ್ಲನ್ನು ರಪಾಟಿ, ಕಲ್ಲಪ್ಪ ಹರಿಯಾಲ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.