ಹೊಸದಿಗಂತ ವರದಿ, ಮಳವಳ್ಳಿ :
ಫೆಂಗಲ್ ಚಂಡಮಾರುತದ ಅಬ್ಬರದಿಂದ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭತ್ತದ ಕೊಯ್ಲು ಪ್ರಾರಂಭವಾಗಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಗೆ ಕೊಯ್ಲು ಮಾಡಿದ ಭತ್ತದ ಗದ್ದೆಗಳಲ್ಲಿ ನೀರು ನಿಂತು ನಷ್ಟ ಅನುಭವಿಸುವಂತಾಗಿದೆ.
ಮಳವಳ್ಳಿ ತಾಲೂಕು ಪುರದದೊಡ್ಡಿ ಗ್ರಾಮದ ನಾಗೇಶ್ ಅವರು ಬೆಳೆದಿದ್ದ ಭತ್ತದ ಕೊಯ್ಲು ಮಾಡಿದ್ದರು. ಫೆಂಗಲ್ ಚಂಡಮಾರುತದಿಂದಾಗಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತದ ಗದ್ದೆ ಸಂಪೂರ್ಣ ನೀರಿನಿಂದ ಆವೃತವಾಗಿದೆ.
ಜಮೀನಿನಲ್ಲಿ ಬೆಳೆದಿದ್ದ ಭತ್ತದ ಕೊಯ್ಲು ಮಾಡಿದ್ದು, ಮಳೆಯ ಕಾರಣ ಭತ್ತ ಪೂರ್ತಿ ನೆನೆದುಹೋಗಿದೆ. ಇದರಿಂದಾಗಿ ಫಸಲು ಕೈ ಸೇರುವ ಮುನ್ನವೇ ನಷ್ಟಕ್ಕೊಳಗಾಗಿದೆ. ರೇಷ್ಮೆ ಹುಳು ಸಾಕಾಣಿಕೆಯಲ್ಲೂ ಹಿಪ್ಪನೇರಳೆ ಸೊಪ್ಪಿನ ಮೇಲೆ ಮಳೆ ಬೀಳುವುದರಿಂದ ಹುಳುಗಳಿಗೂ ಅದನ್ನು ಹಾಕಲಾದ ಸ್ಥಿತಿಯಲ್ಲಿದ್ದೇವೆ ಎಂದು ರೈತ ನಾಗೇಶ್ ಇತರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.