ಹೊಸದಿಗಂತ ವರದಿ ವಿಜಯಪುರ:
ರೈತರು ಬರದ ಸಂಕಷ್ಟದಿಂದ ನರಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ನಷ್ಟ ಪರಿಹಾರ ನೀಡದೇ ರಾಜಕೀಯ ಚೆಲ್ಲಾಟವಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರಗಳು ರೈತರ ನೆರವಿಗೆ ಬರುತ್ತಿಲ್ಲ. ರೈತನ ಸ್ಥಿತಿ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟದಂತಾಗಿದ್ದು, ತಕ್ಷಣವೇ ಪರಿಹಾರ ನೀಡಬೇಕು ಎಂದರು.
ರಾಜ್ಯದ 223 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕೃಷಿ ಸಾಲ ಪಡೆದ ರೈತರು ಸಾಲದ ಹಣವನ್ನು ಬೆಳೆಗೆ ಹೂಡಿಕೆ ಮಾಡಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಬರಗಾಲ ಕಾರಣಗಳಿಂದ ಬೆಳೆ ನಾಶವಾಗಿದೆ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ರೈತನ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕೈಗಾರಿಕಾ ಉದ್ಯಮಿಗಳಿಗೆ, ಸಂಕಷ್ಟದ ನೆರವು ಸಾಲ ಮನ್ನಾ, ತೆರಿಗೆ ಮನ್ನಾ ಮಾಡಿರುವ ರೀತಿ ರೈತರ ಎಲ್ಲಾ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು ಎಂದರು.
ಅಲ್ಲದೇ, ಬೆಂಗಳೂರಿನಲ್ಲಿ ರಾಜಕೀಯೇತರವಾಗಿ ಡಿಸೆಂಬರ್ 23ರಂದು ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಮುಖಂಡರಾದ ರಾಜು ಗುಂದಗಿ, ಧರೆಪ್ಪಗೌಡ ಬಿರಾದಾರ್, ಹತ್ತಹಳ್ಳಿ ದೇವರಾಜ ಕಲ್ಬುರ್ಗಿ, ರಮೇಶ ಉಗರ್ , ಶಿವಲೀಲಾ ಲಿಗಾಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.