ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರ ಜತೆ ಮಾತನಾಡಿದ್ದೇನೆ. ಉಕ್ರೇನ್ ನಲ್ಲಿರುವಂತ ಕರ್ನಾಟಕದ ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಸುರಕ್ಷಿತವಾಗಿ ಅವರನ್ನು ಕರೆತರುವಂತ ಎಲ್ಲಾ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಉಕ್ರೇನ್ ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳ ಪಟ್ಟಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅವರನ್ನು ಉಕ್ರೇನ್ ನಿಂದ ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಹೇಳಿದರು.
ರಷ್ಯಾ ಮತ್ತು ಉಕ್ರೇನ್ನ ಹಲವು ನಗರಗಳಲ್ಲಿ ಬಹಳಷ್ಟು ಭಾರತೀಯರು ಸಿಲುಕಿದ್ದಾರೆ. ಅವರಿಗೆ ಏನೂ ಆಗಿಲ್ಲ. ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದೇವೆ. ರಸ್ತೆ ಮಾರ್ಗ ಮತ್ತು ವಾಯು ಮಾರ್ಗದ ಮೂಲಕ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುತ್ತೇವೆ. ನಾನೂ ಕೂಡ ಕೆಲವು ವಿದ್ಯಾರ್ಥಿಗಳ ಜತೆ ಮಾತಾಡಿದ್ದೇನೆ. ಅವರಿಗೆ ಎಲ್ಲ ರೀತಿಯ ಧೈರ್ಯ ಹೇಳಿದ್ದೇನೆ ಎಂದು ಹೇಳಿದರು.
ಭಾರತೀಯರನ್ನು ಉಕ್ರೇನ್ ನ ಪಶ್ಚಿಮ ಭಾಗದಿಂದ ರೊಮೇನಿಯಾದ ಮೂಲಕ ಭಾರತಕ್ಕೆ ಕರೆತರುವ ಪ್ರಯತ್ನವನ್ನು ಭಾರತ ಸರ್ಕಾರ ನಡೆಸುತ್ತಿದೆ. ರಷ್ಯಾ ಅಧ್ಯಕ್ಷರ ಜೊತೆಗೊ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದೆ. ಯಾರೂ ಆತಂಕಕ್ಕೆ ಒಳಗಾಗ ಬಾರದು ಎಂದರು.