ಹೊಸದಿಗಂತ ವರದಿ ಹಾವೇರಿ:
ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ರಾಣೆಬೆನ್ನೂರಿನ ಎಪಿಎಂಸಿ ಸಮುದಾಯ ಭವನದಲ್ಲಿ ಫೆ.11 ಮತ್ತು 12 ರಂದು ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಬಯ್ಯ ಹಿರೇಮಠ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಾಗಿ ಜೆ.ಎಂ. ಮಠದ ಆಯ್ಕೆಯಾಗಿದ್ದಾರೆ. ಜಿಲ್ಲೆಯಾಗಿ 26 ವರ್ಷ ಕಳೆದರೂ ಮೊದಲ ಬಾರಿಗೆ ರಾಣೆಬೆನ್ನೂರಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಖರ್ಚು ಎಂದು ಕೇಂದ್ರ ಸಮಿತಿ ರೂ.5ಲಕ್ಷ ಅನುದಾನ ನೀಡಲಿದೆ. ನಾವು 12-15 ಲಕ್ಷದ ಅಂದಾಜು ಪಟ್ಟಿ ಮಾಡಿದ್ದು, ಉಳಿದ ಅಗತ್ಯ ಮೊತ್ತವನ್ನು ಸ್ವಾಗತ ಸಮಿತಿ ವ್ಯವಸ್ಥೆ ಮಾಡಲಿದೆ ಎಂದರು.
ನಿಜಶರಣ ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ, ಹಾನಗಲ್ಲ ಕುಮಾರ ಶಿವಯೋಗಿಗಳವರ ಪ್ರಧಾನ ವೇದಿಕೆ, ಪಾಟೀಲ ಪುಟ್ಟಪ್ಪ – ಕೆ.ಎಫ್. ಪಾಟೀಲ ಸಭಾಮಂಟಪ, ಹುತಾತ್ಮ ಮೆಣಸಿನಹಾಳ ತಿಮ್ಮನಗೌಡರ ಮಹಾದ್ವಾರ, ಎಲ್.ಜಿ. ಹಾವನೂರ ಸಭಾಂಗಣ ಪ್ರವೇಶದ್ವಾರದ ಮೂಲಕ ಸಾಹಿತ್ಯ ಕ್ಷೇತ್ರದ ಹಿರಿಯರನ್ನು ಗೌರವಿಸಲಾಗಿದೆ.
ಫೆ.11 ರಂದು ಬೆಳಗ್ಗೆ 7:30ಕ್ಕೆ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ರಾಷ್ಟ್ರಧ್ವಜಾರೋಹಣ ಮಾಡುವರು. ಪರಿಷತ್ತಿನ ಧ್ವಜವನ್ನು ಕಸಾಪ ಜಿಲ್ಲಾದ್ಯಕ್ಷ ಲಿಂಗಯ್ಯ ಹಿರೇಮಠ, ನಾಡಧ್ವಜವನ್ನು ಕಸಾಪ ತಾಲೂಕ ಅಧ್ಯಕ್ಷ ವೀರೇಶ ಜಂಬಗಿ ಆರೋಹಣ ಮಾಡುವರು. ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಈ ವೇಳೆ ಪದಾಧಿಕಾರಿಗಳಾದ ಎಸ್.ಎನ್ ದೊಡ್ಡಗೌಡರ, ಪೃಥ್ವಿರಾಜ ಬೆಟಗೇರಿ, ಪ್ರಭು ಹಿಟ್ನಳ್ಳಿ, ಗೂಳಪ್ಪ ಅರಳೀಕಟ್ಟಿ ಇದ್ದರು.