ಹೊಸದಿಗಂತ ವರದಿ ಉತ್ತರಕನ್ನಡ:
ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಎರಡು ನೂರಕ್ಕೂ ಹೆಚ್ಚು ಗಿಡಗಳನ್ನು ಹಾನಿ ಮಾಡಿದ ಘಟನೆ ಬುಧವಾರ ಜರುಗಿದೆ.
ಶಿವಲಿಂಗಪ್ಪ ಕಳಸಗೇರಿ ಎಂಬುವರ ಸರ್ವೇ ನಂಬರ್ 52 ರಲ್ಲಿ ಬೆಳೆದ 175 ಮೂರು ವರ್ಷದ ಅಡಿಕೆ ಗಿಡಗಳು ಹಾಗೂ ಬಸಪ್ಪ ಕಳಸಗೇರಿ ಎಂಬುವವರ ಸರ್ವೇ ನಂಬರ್ 53 ರಲ್ಲಿಯ 50 ಕ್ಕೂ ಹೆಚ್ಚು ಎರಡು ವರ್ಷದ ಅಡಿಕೆ ಗಿಡಗಳನ್ನು ನಾಶ ಮಾಡಿವೆ. ಅರಣ್ಯದ ಅಂಚಿನಲ್ಲಿರುವ ತೋಟಗಳಿಗೆ ಕಾಡು ಹಂದಿಗಳು ದಾಳಿ ಮಾಡಿ ಅಡಿಕೆ ಗಿಡಗಳನ್ನು ತುಳಿದು ಅಡಿಕೆ ದಂಟಿನ ರಸವನ್ನು ಕುಡಿದಿವೆ.
ಲಕ್ಷಾಂತರ ರೂಪಾಯಿ ಬೆಲೆಬಾಳುವ, ಎರಡು ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹಾನಿ ಮಾಡಿವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು. ಸನವಳ್ಳಿ ಗ್ರಾಮದ ರೈತ ಮುಖಂಡ ನಾಗರಾಜ ಗುಬ್ಬಕ್ಕನವರ ಮಾತನಾಡಿ, ಕಳೆದ ಎರಡು ಮೂರು ವರ್ಷಗಳಿಂದ ಕಾಡು ಹಂದಿಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ, ಹೇಗಾದರೂ ಮಾಡಿ ಸಂಬಂಧಿಸಿದ ಅಧಿಕಾರಿಗಳು ಕಾಡು ಹಂದಿಗಳಿಂದ ರೈತರಿಗೆ ಆಗುವ ತೊಂದರೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು