ಹೊಸದಿಗಂತ ವರದಿ,ವಿಜಯನಗರ:
ಭಾರತ ಸರ್ಕಾರದ ೧೬ನೇ ಕೇಂದ್ರ ಹಣಕಾಸು ಆಯೋಗದ ನಿಯೋಗದ ತಂಡ ಶುಕ್ರವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿದೆ. ಮೊದಲಿಗೆ ಪಂಪಾ ವಿರೂಪಾಕ್ಷನ ದರ್ಶನ ಪಡೆದು, ವಿಜಯ ವಿಠ್ಠಲಕ್ಕೆ ಭೇಟಿ ನೀಡಿದೆ.
ಆಯೋಗದ ಅಧ್ಯಕ್ಷ ಅರವಿಂದ ಪನಾಗರಿಯಾ, ಸದಸ್ಯರಾದ ಅಜಯ್ ನಾರಾಯಣ ಝಾ, ಅನ್ನೀ ಜಾಜ್ ಮ್ಯಾಥ್ಯೂ, ಸೌಮ್ಯಾ ಕಾಟಿ ಘೋಷ್, ಮನೋಜ್ ಪಾಂಡಾ, ಕಾರ್ಯದರ್ಶಿ ತಿಥ್ವಿಕ್ ರಂಜನಮ್ ಪಾಂಡೆ, ಜಂಟಿ ನಿರ್ದೇಶಕ ರಾಹುಲ್ ಜೈನ್, ಉಪ ಕಾರ್ಯದರ್ಶಿ ಅಜಿತ್ ಕುಮಾರ್ ರಂಜನ್ ಸೇರಿದಂತೆ ೧೧ ಜನ ಹಿರಿಯ ಅಧಿಕಾರಿಗಳ ನಿಯೋಗ ಎರಡು ದಿನಗಳ ಕಾಲ ಹಂಪಿ ಕ್ಷೇತ್ರ ಪ್ರವಾಸ ಕೈಗೊಂಡಿದೆ.
ಪೂರ್ವ ನಿಗದಿಯಂತೆ ಬೆಂಗಳೂರಿನಿoದ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ ವೇಳೆಗೆ ತೋರಣಗಲ್ಲಿಗೆ ಆಗಮಿಸಿದ ನಿಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ವಿಜಯನಗರ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎಸ್ಪಿ ಶ್ರೀಹರಿ ಬಾಬು ಬಿ.ಎಲ್., ಜಿಪಂ ಸಿಇಓ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ ಷಾಹ ಮತ್ತಿತರೆ ಅಧಿಕಾರಿಗಳು ಹೂಗುಚ್ಛ ನೀಡಿ, ಬರ ಮಾಡಿಕೊಂಡರು.
ತೋರಣಗಲ್ಲಿನ ಮೂಲಕ ರಸ್ತೆ ಮಾರ್ಗವಾಗಿ ವಿಶೇಷ ವಾಹನದ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹಂಪಿಗೆ ಆಗಮಿಸುತ್ತಿದ್ದಂತೆ ನಿಯೋಗದಲ್ಲಿರುವ ಹಿರಿಯ ಅಧಿಕಾರಿಗಳು ಪುಳಕಿತರಾದರು. ಮೊದಲಿಗೆ ಹಂಪಿಯ ಪ್ರಸಿದ್ಧ ಶ್ರೀ ವಿಜಯವಿಠ್ಠಲ ದೇವಾಲಯಕ್ಕೆ ಭೇಟಿ, ದೇವರ ದರ್ಶನ ಪಡೆದರು. ಬಳಿಕ ಶ್ರೀ ವಿರುಪಾಕ್ಷೇಶ್ವರ ದೇವಾಲಯಕ್ಕೆ ತೆರಳಿ ಸಂಗೀತ ಶಿಲ್ಪ ಕಲಾ ವೈಭವವನ್ನು ಕಣ್ತುಂಬಿಕೊoಡರು. ಶನಿವಾರ ಪ್ರವಾಸ ಮುಂದುವರಿಯಲಿದೆ.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ವಿವೇಕಾನಂದ ಪಿ., ಜಿ.ಪಂ. ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಹಾಗೂ ನಿಯೋಗಕ್ಕೆ ನಿಯೋಜನೆಯಾದ ಲೈಜನ್ ಅಧಿಕಾರಿಗಳು ಇದ್ದರು.