ಹೊಸದಿಗಂತ ಮಂಗಳೂರು:
ಹಿಂದು ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪೂರ್ವಯೋಜಿತವಾಗಿತ್ತೇ? ಘಟನೆಯ ಬಳಿಕ ಈ ಅಂಶ ಹೆಚ್ಚು ಚರ್ಚೆಯಾಗುತ್ತಿದೆ. ಇದೊಂದು ಪೂರ್ವ ಯೋಜಿತ ಕೃತ್ಯ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಇನ್ಸ್ಟಾಗ್ರಾಂನಲ್ಲಿ ‘ಫಿನೀಶ್’ ಎಂಬ ಪೋಸ್ಟ್ ಪ್ರಕಟಗೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.
ತಿಂಗಳ ಹಿಂದೆಯೇ ಎಚ್ಚರಿಸಲಾಗಿತ್ತೇ?
ಮಾರ್ಚ್ 31ರಂದೇ ಎಚ್ಚರಿಕೆಯ ಪೋಸ್ಟ್ ಒಂದು ಇನ್ಸ್ಟಾಗ್ರಾಂನಲ್ಲಿ ಇತ್ತೆನ್ನಲಾಗಿದೆ. ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಮುಹೂರ್ತ ಪಿಕ್ಸ್ ಆಗಿತ್ತಾ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಆ ದಿನ ಟಾರ್ಗೆಟ್ ಕಿಲ್ಲರ್-೦3 ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಸುಹಾಸ್ಶೆಟ್ಟಿಯ ಫೋಟೋ ಹಾಕಿ ಶೀಘ್ರದಲ್ಲಿಯೇ ಸೇಡು ತೀರಿಸಿಕೊಳ್ಳುವುದಾಗಿ ಪ್ರಚೋದನಾಕಾರಿ ಪೋಸ್ಟ್ ಹಾಕಲಾಗಿತ್ತು ಎನ್ನಲಾಗಿದೆ. ಇತ್ತ ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಇನ್ಸ್ಟಾ ಗ್ರಾಂ ಪೇಜ್ನಲ್ಲಿ ‘ಫಿನೀಶ್’ ಎಂಬ ಪೋಸ್ಟ್ ಬಹಿರಂಗಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಇದರ ಜೊತೆಗೆ ವೈಟಿಂಗ್ ಫಾರ್ ನೆಕ್ಸ್ಟ್ ವಿಕೆಟ್ ಎಂಬ ಪೋಸ್ಟ್ ಹಾಕಲಾಗಿದೆ ಎನ್ನಲಾಗಿದ್ದು, ಇದು ಕೂಡ ಆತಂಕಕ್ಕೆ ಕಾರಣವಾಗಿದೆ.
ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ…
ಇನ್ಸ್ಟಾಗ್ರಾಂ ಪೋಸ್ಟ್ನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಪೋಸ್ಟ್ ಹಾಕಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದ್ದರೆ ಇಂತಹದ್ದೊಂದು ಘಟನೆಯನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸುಹಾಸ್ ಶೆಟ್ಟಿಯ ಫೊಟೋ ಹಾಕಿ ಸೇಡು ತೀರಿಸಿಕೊಳ್ಳುವ ಬಗೆಗಿನ ಇನ್ಸ್ಟಾಗ್ರಾಂ ಉಲ್ಲೇಖವನ್ನು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬಂದ ಪೋಸ್ಟ್ಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ದೊಡ್ಡದೊಂದು ಅನಾಹುತ್ತ ತಪ್ಪಿಸಬಹುದಿತ್ತು. ಆದರೆ ಪೊಲೀಸ್ ಇಲಾಖೆ ಈ ವಿಷಯದಲ್ಲಿ ವಿಫಲವಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.