ಹೊಸದಿಗಂತ॒ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿರುವ ಗೃಹೋಪಯೋಗಿ ಮಾರಾಟ ಸಂಸ್ಥೆಯೊಂದರ ಗೋದಾಮಿನಲ್ಲಿ ಮಂಗಳವಾರ ನಸುಕಿಗೆ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ಪುತ್ತೂರು ನಗರದ ದರ್ಬೆ ಮುಖ್ಯ ರಸ್ತೆಯಲ್ಲಿರುವ ಸಂತೃಪ್ತಿ ಹೋಟೇಲ್ ಹಿಂಭಾಗದಲ್ಲಿ ಈ ಗೋದಾಮು ಇದೆ. ಇಲ್ಲಿ ಕೋಟ್ಯಾಂತರ ಮೌಲ್ಯದ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ದಾಸ್ತಾನು ಇರಿಸಲಾಗಿತ್ತು. ಇಂದು ನಸುಕಿನ ಜಾವ ಇದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನ ಒಳಗಿದ್ದ ವಸ್ತುಗಳು ಹೊತ್ತಿ ಉರಿಯುತ್ತಿದ್ದ ತೀವ್ರತೆಗೆ ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಚಿಮ್ಮಿ ಆತಂಕ ಸೃಷ್ಟಿಸಿದ್ದವು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪುತ್ತೂರು ನಗರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತು ವ್ಯವಸ್ತೆ ಮಾಡಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.