ಹೊಸದಿಗಂತ ವರದಿ, ಗದಗ:
ಕೇಂದ್ರ ಸರಕಾರದ ಅಗ್ನಿಪಥ ಯೋಜನೆ ಜಾರಿಯಿಂದ ಕಾಂಗ್ರೆಸ್ಗೆ ಉರಿ ಬಿದ್ದಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ.ಅಗ್ನಿಪಥ ವಿಚಾರದಲ್ಲಿ ಬಹಳ ಜನರು ರಾಜಕೀಯ ನಡೆಸಿದ್ದಾರೆ.ಇಸ್ರೇಲ್ ದೇಶಕ್ಕೆ ಹೋಲಿಸಿ ನೋಡಿದರೆ ಅಲ್ಲಿ ಪ್ರತಿಯೊಂದು ಮನೆಯಲ್ಲಿ ಸೇನೆಗೆ ಸೇರುತ್ತಾರೆ. ನಮ್ಮ ಪ್ರಧಾನಿಗಳು 18 ವರ್ಷದ ಯುವಕರಿಗೆ ಆಸಕ್ತಿ ಇದ್ದರೆ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಮಾಡಬೇಕು ಅಂದರೆ ಇವರಿಗೇಕೆ ಇಷ್ಟೊಂದು ಉರಿ ಅಂತ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.
ಪ್ರತಿಯೊಬ್ಬರಿಗೂ ದೇಶದ ಮೇಲೆ ಪ್ರೀತಿ, ಅಭಿಮಾನ, ಗೌರವ ಇರಬೇಕು.ಅಗ್ನಿಪಥ ಯೋಜನೆ ಒಳ್ಳೆಯ ಕಾರ್ಯಕ್ರಮವಾಗಿದೆ. ಮೋದಿ ಅವರು ಯುವಕರಲ್ಲಿ ದೇಶಪ್ರೇಮ ಮೂಡಿಸುವ ಕೆಲಸ ಮಾಡುತ್ತಿರುವದರಿಂದ ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗದೆ ಯುವಕರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಯೋಜನೆಯಿಂದ ಯುವಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಇನ್ನು ೪೦ %ರಷ್ಟು ಕಮೀಷನ್ನಲ್ಲಿ ಪ್ರಧಾನಿಗೂ ಪಾಲು ಎಂಬ ಕಾಂಗ್ರೆಸ್ ಆರೋಪಕ್ಕೆ ರಾಮುಲು ಅವರು ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹಾವೆಂದರೆ ಅದು ಕಾಂಗ್ರೆಸ್ ಪಕ್ಷ ಎಂದು ತಿರುಗೇಟು ನೀಡಿದರು. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ. ಬಿಜೆಪಿ ಸರ್ಕಾರ ಸಂಪೂರ್ಣ ಪಾರದರ್ಶಕ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡು ಈ ರೀತಿ ಆರೋಪ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗಿಯಾಗುತ್ತಿರುವುದು ಅದು ರಾಜ್ಯಕ್ಕೆ ಶಕ್ತಿ ತರುತ್ತದೆ. ಇಂತಹ ವಿಚಾರದಲ್ಲಿ ಕಾಂಗ್ರೆಸ್ ಟೀಕೆ ಮಾಡುವ ಕೆಲಸ ನೋಡಿದರೆ ಅದರ ನೈತಿಕ ದಿವಾಳಿ ತೋರಿಸುತ್ತದೆ. ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು ಕಾಂಗ್ರೆಸ್ ಇಷ್ಟು ವರ್ಷ ಕೆಲಸ ಮಾಡಿಲ್ಲ. ಬೀದಿಗಿಳಿದು ರಂಪಾಟ ಮಾಡುವ ವಿಚಾರದಲ್ಲಿ ರಾಹುಲ್ ಗಾಂಧಿ ಹೋರಾಟವಾಗಿದೆ. ಕಾನೂನಿಗಿಂತ ರಾಹುಲ್ ಗಾಂಧಿ ದೊಡ್ಡವರಲ್ಲ. ತನಿಖೆ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಇಂತಹವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶ್ರೀರಾಮುಲು ತಿರಗೇಟು ನೀಡಿದರು.