ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಟೂರ್ನಿಯಲ್ಲಿ ಕಳ್ಳಾಟದ ಆತಂಕ ಶುರುವಾಗಿದ್ದುಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್, ಬಿಸಿಸಿಐಗೆ ಈ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ವೇಳೆ ಕೆಲ ಬುಕ್ಕಿಗಳು ತಂಡದೊಳಗಿನ ಮಾಹಿತಿ ಪಡೆಯಲು ಮೊಹಮ್ಮದ್ ಸಿರಾಜ್ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಖುದ್ದು ಮೊಹಮ್ಮದ್ ಸಿರಾಜ್, ಬಿಸಿಸಿಐ ಭ್ರಷ್ಟಾಚಾರ ವಿರೋಧಿ ದಳಕ್ಕೆ(ACU) ಮಾಹಿತಿ ರವಾನಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವ ACU ಸಿರಾಜ್ ಬಳಿ ಮಾಹಿತಿ ಪಡೆಯಲು ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ವಿರುದ್ಧ ಈಗಾಗಲೇ ಬಿಸಿಸಿಐ ಭ್ರಷ್ಟಾಚಾರ ವಿರೋಧಿ ದಳ ರೂಪಿಸಿದ್ದು, ಹೆಚ್ಚಿನ ಅಧಿಕಾರ ನೀಡಿದೆ. ಈ ದಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ವೇಳೆ ಹೈದರಾಬಾದ್ನ ಚಾಲಕನೋರ್ವ ಸಿರಾಜ್ ಸಂಪರ್ಕಿಸಿ ಟೀಂ ಇಂಡಿಯಾ ಮಾಹಿತಿ ಪಡೆಯುವ ಯತ್ನ ಮಾಡಿದ್ದಾರೆ. ಈ ಚಾಲಕ ಬೆಟ್ಟಿಂಗ್ ಮೂಲಕ ಅಪಾರ ಹಣ ಕಳೆದುಕೊಂಡಿದ್ದ. ಹೀಗಾಗಿ ತಾನು ಕಳೆದುಕೊಂಡಿರುವ ಹಣವನ್ನು ಬೆಟ್ಟಿಂಗ್ ಮೂಲಕವೇ ಗಳಿಸಲು ಸಿರಾಜ್ ಸಂಪರ್ಕಿಸಿ, ಕೆಲ ಮಾಹಿತಿ ಪಡೆಯುವ ಪ್ರಯತ್ನ ಮಾಡಿದ್ದನು.
ಮೊಹಮ್ಮದ್ ಸಿರಾಜ್, ಈ ಮಾಹಿತಿಯನ್ನು ACU ನೀಡಿದ್ದಾರೆ. ತಕ್ಷಣವೇ ACU ಘಟನೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಇದೀಗ ಹೈದರಾಬಾದ್ ಮೂಲದ ಚಾಲಕನನ್ನು ಬಿಸಿಸಿಐ ACU ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಮೊಹಮ್ಮದ್ ಸಿರಾಜ್ ಸಂಪರ್ಕಿಸಿದ ವ್ಯಕ್ತಿ ಬುಕ್ಕಿ ಅಲ್ಲ, ಆತ ಓರ್ವ ಚಾಲಕ. ಆದರೆ ಕ್ರಿಕೆಟ್ ಬೆಟ್ಟಿಂಗ್ ಮೂಲಕ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಬೆಟ್ಟಿಂಗ್ ಮೂಲಕವೇ ಹಣಗಳಿಸಲು ಮೊಹಮ್ಮದ್ ಸಿರಾಜ್ ಸಂಪರ್ಕಿಸಿ ಮಾಹಿತಿ ಪಡೆಯಲು ಯತ್ನಿಸಿದ್ದ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಆದರೆ ಈ ಪ್ರಕರಣದಲ್ಲಿ ಮತ್ತಷ್ಟು ತನಿಖೆ ನಡಯೆಲಿದೆ ಎಂದು ಎಸಿಯು ಹೇಳಿದೆ.