ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸರ್ಕಾರದ ಅಬಕಾರಿ ನೀತಿ ಪರಿಷ್ಕರಣೆ ಹೆಸರಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಆರೋಪದಡಿ ಜೈಲು ಪಾಲಾಗಿರುವ ಕೇಜ್ರಿವಾಲ್ ಅವರ ಆಹಾರದ ಬಗ್ಗೆ ಸಾಕಷ್ಟು ಸುದ್ದಿಗಳು ಚಾಲ್ತಿಯಲ್ಲಿದೆ. ಜೈಲಿನಲ್ಲಿ ಒಳ್ಳೆಯ ಆಹಾರ ನೀಡುತ್ತಿಲ್ಲ. ಇನ್ಸುಲಿನ್ ನೀಡುತ್ತಿಲ್ಲ ಎಂಬೆಲ್ಲಾ ಆರೋಪಗಳು ಎದುರಾಗಿವೆ. ಇದೀಗ ಕೇಜ್ರಿವಾಲ್ ಆರೋಗ್ಯದ ಬಗ್ಗೆ ದೆಹಲಿ ಹೈಕೋರ್ಟ್ ಮಾತನಾಡಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯೂಟ ಸಿಗುವಂತೆ ಅವಕಾಶ ಕಲ್ಪಿಸಲಾಗಿದ್ದು, ಮನೆಯೂಟದಲ್ಲೇ ಮಧುಮೇಹ ಹೆಚ್ಚಾಗುವಂಥ ಪದಾರ್ಥಗಳನ್ನು ಕಳುಹಿಸಲಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಇತ್ತೀಚೆಗೆ, ಕೇಜ್ರಿವಾಲ್ ಅವರ ಜಾಮೀನು ಅರ್ಜಿಯು ಯುಗಾದಿ ಹಬ್ಬದ ದಿನದಂದೇ ವಿಚಾರಣೆಗೆ ಬಂದಿತ್ತು. ಆದರೆ, ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಹಾಗಾಗಿ, ಅನಾರೋಗ್ಯದ ಹೆಸರಿನಲ್ಲಿ ಜಾಮೀನು ಪಡೆಯಲು ಕೇಜ್ರಿವಾಲ್ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಜೈಲಿನಲ್ಲಿ ಅವರು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಲು ಬಿಡುತ್ತಿಲ್ಲ. ಅದರಿಂದ ತಮ್ಮ ಮಧುಮೇಹ ಹೆಚ್ಚಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಆರೋಪಿಸಿದ್ದರು.
ಆದರೆ, ಜೈಲಿನ ಸಿಬ್ಬಂದಿ ಹೇಳಿದ್ದೇ ಬೇರೆ. ಕೇಜ್ರಿವಾಲ್ ಅವರಿಗೆ ಮನೆಯೂಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮನೆಯಿಂದ ಬರುವ ಆಹಾರವು ಮಧುಮೇಹಿಗಳ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುವಂಥ ತಿನಿಸುಗಳನ್ನು ಕಳಿಸಲಾಗುತ್ತಿದೆ. ಊಟದ ಜೊತೆಗೆ ಮಾವು, ಸಿಹಿ ತಿಂಡಿಗಳನ್ನು ಕಳಿಸಲಾಗುತ್ತಿದೆ ಎಂದು ಜೈಲು ಸಿಬ್ಬಂದಿ ಆಪಾದಿಸಿದ್ದು ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕೇಜ್ರಿವಾಲ್ ಅವರ ವೈದ್ಯರು ಅವರಿಗೆ ಆಲೂಗಡ್ಡೆ, ಕೆಸುವಿನ ಗಡ್ಡೆ, ಮಾವಿನ ಹಣ್ಣುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದು, ಅವರಿಗೆ ಮನೆಯಿಂದ ಬಂದ ಊಟಲ್ಲಿ ವೈದ್ಯರು ನಿರ್ಬಂಧಿಸಿರುವ ಪದಾರ್ಥಗಳನ್ನೇ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.