ಅನುದಾನಕ್ಕಾಗಿ ಯುಜಿಸಿ ಮೊರೆ ಹೋದ ಮೈಸೂರು ವಿಶ್ವವಿದ್ಯಾಲಯ

 ಹೊಸ ದಿಗಂತ ವರದಿ, ಮೈಸೂರು:

ಕೊರೋನಾ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿಯ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ವಿಶ್ವವಿದ್ಯಾಲಯ ಇದೀಗ ಅನುದಾನಕ್ಕಾಗಿ ಯುಜಿಸಿಯ ಮೊರೆ ಹೋಗಿದೆ.
ವಿವಿಯ ಆರ್ಥಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಸಂಶೋಧನಾ ಕಾರ್ಯಗಳಿಗೆ ಅನುದಾನ ನೀಡುವಂತೆ ಕೋರಿ ಮೈಸೂರು ವಿಶ್ವವಿದ್ಯಾನಿಲಯವು ಯುಜಿಸಿಗೆ ಮನವಿಯನ್ನು ಸಲ್ಲಿಸಿದೆ.
ದೆಹಲಿಯಲ್ಲಿ ಯುಜಿಸಿ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿರುವ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ವವಿದ್ಯಾಲಯದಿಂದ ನಡೆಸುವ ಸಂಶೋಧನೆ ಕಾರ್ಯಗಳಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಸಂಬAಧ ಮಾತನಾಡಿದ ಅವರು, ಕೊರೋನಾ ಪರಿಸ್ಥಿತಿಯಿಂದಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಶೋಧನೆ ಚಟುವಟಿಕೆಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ. ಉನ್ನತ ಶಿಕ್ಷಣದ ಅಧ್ಯಯನ, ಸಂಶೋಧನಾ ಕಾರ್ಯಕ್ರಮಗಳಿಗೆ ಅನುದಾನ ಇಲ್ಲವಾಗಿದೆ. ಸದ್ಯ ಲಭ್ಯವಿರುವ ಸಂಪನ್ಮೂಲವು ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಖರ್ಚಾಗುತ್ತಿದ್ದು, ಸಂಶೋಧನಾಗೆ ಯಾವುದೇ ಪ್ರತ್ಯೇಕ ಅನುದಾನ ಇಲ್ಲ ಎಂಬುದನ್ನು ಯುಜಿಸಿ ಮುಖ್ಯಸ್ಥರಿಗೆ ವಿವರಿಸಿದ್ದೇನೆ,” ಎಂದು ಹೇಳಿದರು.
ರಾಜ್ಯ ಸರಕಾರ ಸಂಶೋಧನಾ ಉದ್ದೇಶಕ್ಕೆ ಅನುದಾನ ನೀಡುವುದಿಲ್ಲ. ಯುಜಿಸಿಯೂ ಸಹ ಕಳೆದ ಹಲವು ವರ್ಷಗಳಿಂದ ಅನುದಾನ ಕಡಿತಗೊಳಿಸಿರುವುದರಿಂದ ವೈಜ್ಞಾನಿಕ ವಿಷಯಗಳ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಹಿಂದೆ ಪ್ರೊ.ತಳವಾರ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ 150 ಕೋಟಿ ರೂಗಳ ಅನುದಾನವನ್ನು ಯುಜಿಸಿ ನೀಡಿತ್ತು. ಅದರಲ್ಲಿ ಶೇ.55ರಷ್ಟನ್ನು ಸಂಶೋಧನಾ ಕಾರ್ಯಕ್ಕೆ ಹಾಗೂ ಶೇ.45ರಷ್ಟು ಹಣವನ್ನು ಕಟ್ಟಡ ಮತ್ತು ಮೂಲ ಸೌಕರ್ಯ ಕಲ್ಪಿಸಲು ಬಳಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!