ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರ ಇಂದು ಒಂದು ವರ್ಷದ ಆಡಳಿತ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಸಿಎಂ ಸ್ಟಾಲಿನ್ ಸಮಾರಂಭ ಮೂಲಕ ವಿಜೃಂಬಿಸುವ ಬದಲು ಸಾಮಾನ್ಯ ವ್ಯಕ್ತಿಯಂತೆ ಬಸ್ ಏರಿ ಸಾರ್ವಜನಿಕರ ಕಷ್ಟ ಆಲಿಸಿದ್ದಾರೆ.
ಎಂ ಕೆ ಸ್ಟಾಲಿನ್ ಬಸ್ನಲ್ಲಿದ್ದ ಪ್ರಯಾಣಿಕರ ಜೊತೆ ಸಂವಾದ ನಡೆಸಿದರು. ಕಂಡಕ್ಟರ್ ಜೊತೆಯೂ ಮಾತನಾಡಿದರು. ತಮ್ಮ ಸರಕಾರದ ಒಂದು ವರ್ಷದ ಆಡಳಿತದ ಬಗ್ಗೆ ಅವರಿಂದಲೇ ನೇರವಾಗಿ ಅಭಿಪ್ರಾಯ ಕೇಳಿದರು.
ತಮಿಳುನಾಡಿನ ಎಂಟಿಸಿಗೆ ಸೇರಿದ ರಾಧಾಕೃಷ್ಣನ್ ಸಲೈ ಮಾರ್ಗದ 29C ನಂಬರ್ನ ಬಸ್ನಲ್ಲಿ ಸ್ಟಾಲಿನ್ ಸಾರ್ವಜನಿಕರ ಜೊತೆ ಕೆಲ ಕಾಲ ಕಳೆದದ್ದು ವಿಶೇಷ. ತಮಿಳುನಾಡಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗಿತ್ತು. ಬಸ್ನಲ್ಲಿದ್ದ ಮಹಿಳಾ ಪ್ರಯಾಣಿಕರ ಜೊತೆ ಈ ಬಗ್ಗೆ ಮಾತನಾಡಿ ಅಭಿಪ್ರಾಯ ಕಲೆಹಾಕಿದರು ಸಿಎಂ.
ಬಳಿಕ ಮುಖ್ಯಮಂತ್ರಿ ಸ್ಟಾಲಿನ್ ಮರೀನಾ ಬೀಚ್ ಬಳಿ ತೆರಳಿ ಅಲ್ಲಿ ಮಾಜಿ ಸಿಎಂ ಹಾಗೂ ತಮ್ಮ ತಂದೆ ದಿವಂಗತ ಎಂ ಕೆ ಕರುಣಾನಿಧಿ ಮತ್ತು ಡಿಎಂಕೆ ಸಂಸ್ಥಾಪಕ ಸಿ ಎನ್ ಅಣ್ಣಾದುರೈ ಅವರ ಸಮಾಧಿಗೆ ಭೇಟಿ ಕೊಟ್ಟು ಶ್ರದ್ಧಾಂಜಲಿ ಸಲ್ಲಿಸಿದರು.
ಐದು ಘೋಷಣೆಗಳು:
ಸರಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಎಂ ಕೆ ಸ್ಟಾಲಿನ್ ತಮಿಳುನಾಡು ವಿಧಾನಸಭೆಯಲ್ಲಿ ಐದು ಮಹತ್ವದ ಘೋಷಣೆಗಳನ್ನ ಮಾಡಿದರು.
1) ಒಂದರಿಂದ ಐದನೇ ತರಗತಿವರೆಗಿನ ಸರಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ಯೋಜನೆ
2) ಶಾಲಾ ವಿದ್ಯಾರ್ಥಿಗಳಿಗೆ ಮೆಡಿಕಲ್ ಚೆಕಪ್
3) ಉತ್ಕೃಷ್ಟ ಗುಣಮಟ್ಟದ ಶಾಲೆಗಳ ಸ್ಥಾಪನೆ
4) ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರ ರೀತಿಯ ಆಸ್ಪತ್ರೆಗಳ ಸ್ಥಾಪನೆ
5) ‘ನಿಮ್ಮ ಕ್ಷೇತ್ರದಲ್ಲಿ ಸಿಎಂ’ ಎಂಬ ಯೋಜನೆ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆ.