ಹೊಸ ದಿಗಂತ ವರದಿ, ಶಿರಸಿ:
ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಂ ಅವರು “ಆತ್ಮ ನಿರ್ಭರ ಭಾರತ” ವನ್ನು ನಿರ್ಮಾಣ ಮಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುವುದಕ್ಕೆ ಅತ್ಯಂತ ದೂರದೃಷ್ಟಿಯ ಬಜೆಟ್ ಅನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
2022 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಣ್ಣ ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದ ಸ್ಥಳೀಯವಾಗಿ ಉದ್ಯೋಗದ ಸಂಖ್ಯೆಯು ಹೆಚ್ಚಾಗಲಿದೆ.ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಲಾಗಿದೆ ಇದಕ್ಕಾಗಿ ಬಜೆಟ್ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಕೌಶಲ್ಯಗಳ ಪೂರೈಕೆ ಮತ್ತು ಅವುಗಳ ಸಮರ್ಪಕ ಜಾರಿಗೆ ದೇಶ್ ಇ-ಪೋರ್ಟಲ್ ಸ್ಥಾಪನೆ, ಆನ್ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆ, ಎವಿಜಿಸಿ ಕಾರ್ಯಪಡೆ ಸ್ಥಾಪನೆ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗೆ ಆದ್ಯತೆ ಕೊಟ್ಟಿರುವುದು ಇಂದಿನ ಡಿಜಿಟಲ್ ಯುಗಕ್ಕೆ ಹೊಸ ಚೈತನ್ಯವನ್ನು ನೀಡಿದೆ.
ಕೇಂದ್ರ ಸರಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸಲು, ಪ್ರಬಲ ಮೂಲಸೌಕರ್ಯ, ಮಹಿಳಾ ಸಬಲೀಕರಣ,ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಸ್ವಸ್ಥ ಭಾರತ, ಉತ್ತಮ ಆಡಳಿತ, ಎಲ್ಲರಿಗೂ ಶಿಕ್ಷಣ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಮೋದಿ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ.
ದೇಶದ ಜನತೆಗೆ ಯಾವುದೇ ತೆರಿಗೆ ಭಾರವನ್ನು ಹಾಕದೆ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಬಜೆಟ್ ಮಂಡನೆ ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ಈ ಬಜೆಟ್ ನಲ್ಲಿ ರೈತರಿಗೆ, ಬಡವರಿಗೆ, ಗ್ರಾಮೀಣ ಜನರಿಗೆ ಸಾಕಷ್ಟು ಒತ್ತು ನೀಡಲಾಗಿದೆ ರೈತರಿಗೆ ಈ ಬಜೆಟ್ ವರದಾನವಾಗಿದೆ.