ಆರ್ಥಿಕ ಸುಧಾರಣೆ, ಸ್ಥಿರೀಕರಣ ಮತ್ತು ಬೆಳೆವಣಿಗೆಗೆ ಪೂರಕವಾದ ಕೇಂದ್ರ ಬಜೆಟ್: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಮುಂಬರುವ ವರ್ಷದಲ್ಲಿ ಆರ್ಥಿಕ ಸುಧಾರಣೆ, ಸ್ಥಿರೀಕರಣ ಮತ್ತು ಬೆಳೆವಣಿಗೆಗೆ ಪೂರಕವಾದ ಕೇಂದ್ರ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

2022-23ನೇ ಸಾಲಿನ ಕೇಂದ್ರ ಮುಂಗಡ ಪತ್ರಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕೋವಿಡ್ ನೆರಳಿನಲ್ಲಿ ಭಾರತದ ಆರ್ಥಿಕತೆಯನ್ನು ಶೇ.9.2 ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬಂಡವಾಳ ಹೂಡಿಕೆ ಹಾಗೂ ಬಳಕೆ ಎರಡೂ ಹೆಚ್ಚಿಸುವ ದೂರದೃಷ್ಟಿಯಿಂದ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.

ಬಂಡವಾಳ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಮುಖಾಂತರ ಆರ್ಥಿಕತೆ ಹೆಚ್ಚುತ್ತದೆ. ಉತ್ಪಾದನೆ ಹಚ್ಚಿ ಬಳಕೆ ಜಾಸ್ತಿಯಾದಾಗ ಆರ್ಥಿಕತೆ ಹೆಚ್ಚುತ್ತದೆ. ಮೂಲಸೌಕರ್ಯಗಳ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಡಿಜಿಟಲ್ ಆರ್ಥಿಕತೆ ಮತ್ತು ರಾಜ್ಯಗಳಿಗೆ ಬಹು ಮಾದರಿ ಸಂಪರ್ಕಗಳ ಕ್ಷೇತ್ರದಲ್ಲಿ ಹೂಡಿಕೆಯಾಗಲಿದೆ ಎಂದು ತಿಳಿಸಿದರು.

ಗ್ರಾಮೀಣ ಭಾರತ ಬಲಪಡಿಸುವ ಮಹತ್ವಾಕಾಂಕ್ಷೆಯ ಬಜೆಟ್:
ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಜೆಟ್. ಜಲಜೀವನ ಮಿಷನ್ , ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಪ್ರಧಾನ ಮಂತ್ರಿ ಆವಾಸ ಯೋಜನೆ, ಪ್ರಧಾನ ಮಂತ್ರಿ ಸಡಕ್ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್. ಜನಸಾಮಾನ್ಯರ ನಿರೀಕ್ಷೆಗೆ ತಕ್ಕುದಾದ ಹಾಗೂ ಅವರ ಆವಶ್ಯಕತೆಗೆ ಪೂರಕವಾಗಿ ಕುಡಿಯುವ ನೀರು, ರಸ್ತೆ, ಮನೆ ನಿರ್ಮಾಣ ಮಾಡಲು ಬಹಳ ಒತ್ತು ನೀಡಿರುವ ಬಜೆಟ್ ಇದಾಗಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿಗೆ ಹೊಸತನ: ಡಿಜಿಟಲೈಶೇಷನ್, ಟೌನ್ ಪ್ಲ್ಯಾನ್ ತಜ್ಞರ ಬಳಕೆಗೆ ಒತ್ತು ನೀಡಲಾಗಿದೆ. ನಗರ ಸಾರಿಗೆಗೆ ದೊಡ್ಡ ಪ್ರಮಾಣ ಅನುದಾನ ಮೀಸಲಿಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಸಮಾನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ದೇಶದ ಕೃಷಿಯಲ್ಲಿ ಸ್ವಾವಲಂಬನೆಯ ಗುರಿ ಹೊಂದಲಾಗಿದೆ. ನೈಸರ್ಗಿಕ ಕೃಷಿ ಮತ್ತು ಎಣ್ಣೆ ಬೀಜಗಳಿಗೆ ಒತ್ತು ನೀಡಿದೆ ಎಂದು ತಿಳಿಸಿದರು.

ರಕ್ಷಣಾ ವಲಯದಲ್ಲಿ ದೇಶೀಯ ಉತ್ಪನ್ನಗಳಿಗೆ ಒತ್ತು:
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು. ಶೇ. 68ರಷ್ಟು ದೇಶೀಯವಾಗಿ ಉತ್ಪಾದಿಸಿರುವ ಶಸ್ತ್ರಾಸ್ತ್ರಗಳು, ಬಿಡಿ ಭಾಗಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಆರ್ಥಿಕತೆಯನ್ನು ಬೆಂಬಲಿಸುವ ಹಾಗೂ ಆಸ್ತಿಗಳನ್ನು ನಿರ್ಮಿಸಲು ಪೂರಕವಾಗುವಂತೆ ಬಂಡವಾಳ ಹೂಡಿಕೆಯನ್ನು ಶೇ. 35ರಷ್ಟು ಹೆಚ್ಚಿಸಿ ₹ 7.50 ಲಕ್ಷ ಕೋಟಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನದ ಸಾಧ್ಯತೆ:
ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ರಾಜ್ಯಕ್ಕೆ ₹ 3,500 ಕೋಟಿಗಳ ಹೆಚ್ಚಿನ ಅನುದಾನ ರಾಜ್ಯದ ಬಂಡವಾಳ ಖಾತೆಗೆ ದೊರೆಯಲಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು, ಮೂಲಭೂತಸೌಕರ್ಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ನಗರ ಸಾರಿಗೆಯಲ್ಲಿ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಎಂ.ಎಸ್.ಎಂ.ಇ.ಗಳ ಪುನಶ್ಚೇತನ:
ಇಸಿಎಲ್‍ಜಿಎಸ್ ಯೋಜನೆಯನ್ನು ಘೋಷಿಸುವ ಮೂಲಕ ಕೋವಿಡ್ ಸಾಂಕ್ರಾಮಿಕದಿಂದ ನಷ್ಟಕ್ಕೊಳಗಾಗಿರುವ ಎಂ.ಎಸ್.ಎಂ.ಇ. ಪುನಶ್ಚೇತನಕ್ಕೆ ₹ 50 ಸಾವಿರ ಕೋಟಿ ಇದ್ದುದ್ದನ್ನು ₹ 5 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗಿದೆ. ಆತಿಥ್ಯ ಉದ್ಯಮವನ್ನೂ ಇದು ಒಳಗೊಂಡಿರುವುದರಿಂದ ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೆ ಬಹಳ ದೊಡ್ಡ ಪರಿಣಾಮವನ್ನು ಉಂಟು ಮಾಡಲಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಬಜೆಟ್ ಹೆಚ್ಚಾಗಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದು ಸಿಎಂ ತಿಳಿಸಿದರು.

ಒನ್ ನೇಷನ್: ಒನ್ ಪ್ರಾಪರ್ಟಿ
ದೇಶದಾದ್ಯಂತ ನೋಂದಣಿ ವ್ಯವಸ್ಥೆ ಒಂದೇ ಮಾದರಿಯಲ್ಲಿ ಇರಬೇಕು ಎಂದು ಒನ್ ನೇಷನ್: ಒನ್ ಪ್ರಾಪರ್ಟಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಬಹಳಷ್ಟು ರಾಜ್ಯಗಳಲ್ಲಿ ನೋಂದಣಿ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಇವುಗಳನ್ನು ನಿವಾರಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!