ಹೊಸದಿಗಂತ ವರದಿ,ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಹಲವು ರೈತರ ಜಮೀನಿನ ಬೆಳೆಗಳನ್ನು ನಷ್ಟಪಡಿಸುವುದರ ಜೊತೆಗೆ ಇದೀಗ ಜಮೀನಿನ ಸಮೀಪದ ಮನೆಯಂಗಳಕ್ಕೂ ದಾಳಿ ಮಾಡಿ ಅಪಾರ ಪ್ರಮಾಣದ ತೆಂಗು, ಅಡಿಕೆ ಹಾಗೂ ಸಿಹಿ ಗೆಣಸು ಬೆಳೆಗಳನ್ನು ತಿಂದು ತುಳಿದು ಹಾನಿಗೊಳಿಸಿವೆ.
ಜೊತೆಗೆ ನಾಲ್ಕು ತೆಂಗಿನ ಮರಗಳನ್ನು ಬುಡಸಮೇತ ಉರುಳಿಸಿದ್ದು, ಅಡಿಗೆ ಮರಗಳನ್ನು ಸಹ ಮನಬಂದಂತೆ ನೆಲಕ್ಕೆ ಉರುಳಿಸಿವೆ.
ಹುದುಗೂರು ಗ್ರಾಮದ ಸ್ವಾಮಿ, ಪೂವಣ್ಣ, ಶಿವಣ್ಣ ಸೇರಿದಂತೆ ಅನೇಕ ರೈತರ ಮನೆಯಂಗಳಕ್ಕೆ ದಾಳಿ ಮಾಡಿರುವ ಆನೆಗಳು ಅಡಿಕೆ ಮತ್ತು ತೆಂಗಿನ ಮರಗಳನ್ನು ಬಿಳಿಸಿ ನಷ್ಟಪಡಿಸಿವೆ.
ಅಲ್ಲದೆ ತೆಂಗಿನ ಮರ ಬಿದ್ದ ಶಬ್ಧಕ್ಕೆ ಹೂರ ಬಂದ ಮನೆಯವರನ್ನೂ ಓಡಿಸಿದ ಘಟನೆ ನಡೆದಿದೆ.
ಆನೆಕಾಡಿನಿಂದ ಹಾರಂಗಿ ನದಿಯನ್ನು ದಾಟಿ ಬಂದಿರುವ ಕಾಡಾನೆಗಳ ಹಿಂಡು ಮನ ಬಂದಂತೆ ಅಡಿಕೆ ಮರಗಳನ್ನು ಮುರಿಯುವ ಸಂದರ್ಭದಲ್ಲಿ ತೋಟದ ಮಧ್ಯದಲ್ಲಿ ಹುದುಗೂರುವಿನಿಂದ ಹಾರಂಗಿಯ ಕಡೆಗೆ ಹೋಗಿರುವ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬದ ಎರಡು ವಯರ್’ಗಳು ತುಂಡಾಗಿ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಸ್ಪರ್ಶದಿಂದಾಗಿ ಕಾಡಾನೆಗಳು ಕಿರುಚುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿವೆ.
ಸಂಜೆಯಾಗುತ್ತಲೇ ಮುಖ್ಯ ರಸ್ತೆಗೆ ಬರುವ ಕಾಡಾನೆಗಳಿಂದಾಗಿ ಈ ವ್ಯಾಪ್ತಿಯ ಸಾರ್ವಜನಿಕರು ರೈತರು ಭಯಭೀತರಾಗಿದ್ದು, ಕಾಡಾನೆಗಳಿಂದ ತುಂಡಾಗಿರುವ ವಿದ್ಯುತ್ ತಂತಿಯನ್ನು ಅಳವಡಿಸುವ ಕಾರ್ಯದಲ್ಲಿ ವಿದ್ಯುತ್ ನಿಗಮದ ಸಿಬ್ಬಂದಿಗಳು ತೊಡಗಿದ್ದಾರೆ.