ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಳ ಮೀಸಲಾತಿ ವಿಚಾರ ಸಂಪುಟದ ಮುಂದಿದೆ. ಈ ವಿಷಯ ಪರಿಶೀಲನೆಗೆ ಐದು ಸದಸ್ಯರ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ ಎಂದು ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ದಿನದಲ್ಲಿ ಸಮಿತಿ ರಚಿಸಿದ್ದಾರೆ. ಸಂಪುಟ ಉಪ ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಕೂಡಲೇ ಸಮಿತಿ ರಚಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಹಲವು ದಿನಗಳಿಂದ ಹೋರಾಟ ನಡೆದಿದೆ. ಇದು ಇವತ್ತಿನ ವಿಷಯವಲ್ಲ. 20- 25 ವರ್ಷಗಳಿಂದ ಸತತ ಹೋರಾಟ ನಡೆಯುತ್ತಲೇ ಬಂದಿತ್ತು. ಹಿಂದಿನ ಸರಕಾರಗಳೂ ಆಯೋಗ ರಚನೆ ಮಾಡಿ ವರದಿ ಸಲ್ಲಿಕೆಯಾಗಿ ಹೆಚ್ಚು ಕಡಿಮೆ 9 ವರ್ಷಗಳೇ ಆಗಿವೆ. ಆದರೂ ಕೂಡ ವರದಿ ಸದನದಲ್ಲಿ ಚರ್ಚೆಗೆ ಬಂದಿಲ್ಲ ಎಂದು ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹೋರಾಟನಿರತರು ಸರಕಾರದ ಸಕಾರಾತ್ಮಕ ಸ್ಪಂದನೆಯನ್ನು ಗಮನಿಸಿ ಹೋರಾಟ ರದ್ದು ಮಾಡಬೇಕೆಂದು ಅವರು ಮನವಿ ಮಾಡಿದರು. ಹೋರಾಟಕ್ಕೆ ಶ್ರಮದಿಂದ ನಡೆದುಬಂದವರೇ ಬೇರೆ. ಆದರೆ ಅವರ ಜೊತೆ ಎಸ್ಡಿಪಿಐ ನವರು ಸೇರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.