ಹೊಸದಿಗಂತ ವರದಿ: ಶ್ರೀರಂಗಪಟ್ಟಣ :
ಮಾಜಿ ರಾಜ್ಯಪಾಲರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪಟ್ಟಣ ಹೊರವಲಯದ ಚಂದ್ರವನ ಆಶ್ರಮಕ್ಕೆ ಆಗಮಿಸಿ ಚಂದ್ರವನ ಸಿರಿ ಪ್ರಶಸ್ತಿಯನ್ನು ಗೌರವ ಸ್ವೀಕರಿಸಿದರು.
ಆಶ್ರಮದ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಜಿಗಳು ಎಂ.ಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿ ನಂತರ ಮಾತನಾದರು. ನಮ್ಮ 25ನೇ ವರ್ಷದ ಪಟ್ಟಾಧಿಕಾರದ ಸಮಾರೋಪ ಸಮಾರಂಭಕ್ಕೆ ಈ ರಾಜಕೀಯ ದಿಗ್ಗಜರನ್ನು ಕರೆಸಬೇಕೆಂಬ ಆಶಯವನ್ನು ಹೊಂದಿದ್ದು, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲಾಗದೇ, ಎಸ್.ಎಂ ಕೃಷ್ಣ ಅವರು ಇಂದು ಆಶ್ರಮಕ್ಕೆ ಆಗಮಿಸಿದ್ದು ತಮಗೆ ಬಹಳ ಸಂತೋಷವಾಗಿದೆ.
ಅವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ವೇಳೆ ಬರಗಾಲದಲ್ಲೂ ಎಂದೂ ವಿಚಲಿತರಾಗದೇ ಶಾಂತ ಚಿತ್ತ ಸಮಾಧಾನದಿಂದ ಎಲ್ಲರಿಗೂ ಉತ್ತರ ಕೊಡುತ್ತಿದ್ದರು. ಅನೇಕ ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಇವರು ಶತಾಯುಷಿಗಳಾಗಲೆನ್ನುವುದೇ ನಮ್ಮ ಹಾರೈಕೆ ಎಂದು ತಿಳಿಸಿದರು.
ನಂತರ ಎಸ್.ಎಂ. ಕೃಷ್ಣ ಮಾತನಾಡಿ, ನಾವು ಅಂದು ಸಮಾರೋಪ ಸಮಾರಂಭಕ್ಕೆ ಅಗಮಿಸಲು ಸಾದ್ಯವಾಗಲಿಲ್ಲ. ಆದ್ದರಿಂದ ಎಲ್ಲಾ ಪೂಜ್ಯರುಗಳಲ್ಲಿ ಕ್ಷಮೆ ಕೋರುತ್ತೇನೆ ಎಂದರು. ಹಿರಿಯ ಶ್ರೀಗಳಿಂದಾಗಿ ಆಶ್ರಮ ಸ್ಫೂರ್ತಿದಾಯಕವಾಗಿ ಬೆಳವಣಿಗೆಯಾಗಿದೆ. ವಿಶ್ವವ್ಯಾಪಿಯಾದ ಯೋಗಾಸನವನ್ನು ತಾವೂ ಕೂಡ ಹಿಂದೆ ಮಾಡುತ್ತಿದ್ದು ಇಂದು ಆರಾಮದಾಯಕವಾದ ಜೀವನವನ್ನು ನೀಡಿದ್ದರಿಂದ, ಇಂದಿನ ಯುವ ಪೀಳಿಗೆಯು ಯೋಗದ ಬಗ್ಗೆ ತಿಳಿದುಕೊಂಡು ಅವರೆಲ್ಲರೂ ಯೋಗವನ್ನು ಮಾಡಬೇಕು ಮತ್ತು ಇಂತಹ ಗುರುಕುಲಗಳು ಇದಕ್ಕೆಲ್ಲಾ ದೊಡ್ಡ ಆಯಾಮವನ್ನು ಏರ್ಪಾಡು ಮಾಡಿವೆ. ನಮಗೆ ಈ ಮಠದ ಮೇಲೆ ಅಪಾರ ಗೌರವವಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಎಸ್.ಎಂ.ಕೃಷ್ಣರವರು ಶ್ರೀಮಠದ ಬಗೆಗಿನ ಅಂತರಾಳದ ಮಾತನ್ನು ಹೇಳಿದ್ದಾರೆ. ಮುತ್ಸದ್ಧಿ ರಾಜಕಾರಣಿಗಳಾದ ಇವರು ಚಂದ್ರವನ ಆಶ್ರಮಕ್ಕೆ ಆಗಮಿಸಿದ್ದು ಎಲ್ಲ ಭಕ್ತಾದಿಗಳಿಗೆ ಬಹಳ ಸಂತೋಷವಾಗಿದೆ ಎಂದರು.
ಬಿಜೆಪಿ ಮುಖಂಡ ಇಂಡವಾಳು ಎಸ್. ಸಚ್ಚಿದಾನಂದ, ಅರವಿಂದ್.ಎಸ್.ಸಿ., ಟಿ.ಪಿ. ಶಿವಕುಮಾರ್, ಇಂಜಿನಿಯರ್ ನಾಗೇಶ್, ನಾಗಣ್ಣ, ಪುರಸಭೆ ಸದಸ್ಯ ಕೃಷ್ಣಪ್ಪ, ಪೈಲ್ವಾನ್ ಮುಕುಂದ ಸೇರಿದಂತೆ ಇತರರು ಇದ್ದರು.