ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿ ನೀವು ಗಟ್ಟಿಯಾಗಿದ್ದೀರಿ. ಲೋಕಸಭೆ ಚುನಾವಣೆಗೆ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸಿ. ಶ್ರೀರಾಮನ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಹೇಳಿದ್ದಾರೆ. ಅದೇ ರೀತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿರುವುದನ್ನು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಸವರಾಜ ಬೊಮ್ಮಾಯಿ, ಇಂದು ನನ್ನ ಜನ್ಮದಿನದಂದು ನನಗೆ ಕರೆಮಾಡಿ ಜನ್ಮದಿನದ ಶುಭಕೋರಿದ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಪ್ರಧಾನಿ ಅವರು ನನ್ನ ಆರೋಗ್ಯ ವಿಚಾರಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ತಿಳಿಸಿದ್ದಾರೆ. ಪ್ರಭು ಶ್ರೀ ರಾಮಚಂದ್ರನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದರು. ಪ್ರಧಾನಿ ಅವರ ಶುಭಾಶಯ ಹಾಗು ಹಿತನುಡಿಗಳು ನನ್ನ ಆತ್ಮ ಸ್ಥೈರ್ಯ ಹಾಗೂ ಹುಮ್ಮಸ್ಸನ್ನು ಇಮ್ಮುಡಿಗೊಳಿಸಿದೆ. ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.
ಬುದ್ದಿಮಾಂದ್ಯ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಣೆ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಜನ್ಮದಿನವನ್ನು ಬುದ್ದಿಮಾಂದ್ಯ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಈಗಾಗಲೇ ಐ ಕ್ಯಾಂಪ್, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಕಾರ್ಯಕ್ರಮ ನೆರವೇರಿಸಲಾಗಿದೆ. ಅಲ್ಲದೇ ತಮ್ಮ ಟ್ರಸ್ಟ್ ವತಿಯಿಂದ 250 ವಿದ್ಯಾರ್ಥಿಗಳಿಗೆ ತಲಾ 5000 ಶಿಷ್ಯವೇತನ ನೀಡಿದ್ದಾರೆ.