ಹೊಸದಿಗಂತ ವರದಿ ಮಡಿಕೇರಿ :
ಹಿರಿಯ ರಾಜಕಾರಣಿ, ಮಾಜಿ ಸಚಿವ ಟಿ. ಜಾನ್ (92) ಅವರು ಬೆಂಗಳೂರಿನ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ.
ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದ ಟಿ.ಜಾನ್ ಅವರು ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದ ಅವರು, ಕಷ್ಟ ಹೇಳಿಕೊಂಡು ಯಾರೇ ಬಂದರೂ ಸಹಾಯಹಸ್ತ ಚಾಚುತ್ತಿದ್ದರು.
ಮೂಲತಃ ಕೇರಳದವರಾದ ಟಿ.ಜಾನ್, ಕೊಡಗಿಗೆ ಬಂದು ಸಾಕಷ್ಟು ಕಷ್ಟಪಟ್ಟು ಛಲದಿಂದ ಉದ್ಯಮದಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಮೇಲಕ್ಕೇರಿದ್ದರು.
ಶಿಕ್ಷಣ ಸಂಸ್ಥೆಗಳು, ರೆಸಾರ್ಟ್ ಗಳನ್ನು ಕೂಡಾ ಜಾನ್ ಅವರು ಆರಂಭಿಸಿ ಯಶಸ್ಸು ಗಳಿಸಿದ್ದರು. ಶನಿವಾರ ಬೆಂಗಳೂರಿನಲ್ಲಿ ಟಿ.ಜಾನ್ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.