ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಧವ್ ಠಾಕ್ರೆ ರಾಜೀನಾಮೆ ಕುರಿತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ಹಾಗೂ ಬಾಳಾ ಠಾಕ್ರೆ ಸೋದರನ ಪುತ್ರ ರಾಜ್ ಠಾಕ್ರೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಗುರುವಾರ ಟ್ವೀಟ್ ಮಾಡಿರುವ ಅವರು, ‘ಒಬ್ಬ ವ್ಯಕ್ತಿಯು ತನ್ನ ಅದೃಷ್ಟವನ್ನೇ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಭಾವಿಸಿದ ದಿನ ಆತನ ಅವನತಿ ಆರಂಭವಾಗುತ್ತದೆ’ ಎಂದು ತಿಳಿಸಿದ್ದಾರೆ.
ಶಿವಸೇನಾದಿಂದ ಹೊರಹೋಗಿದ್ದ ರಾಜ್ ಠಾಕ್ರೆ ಅವರು ಸುಮಾರು ಎರಡು ದಶಕಗಳ ಹಿಂದೆ ತಮ್ಮದೇ ಪಕ್ಷ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪಿಸಿದರು.ರಾಜ್ ಠಾಕ್ರೆ ತಂದೆ ಶ್ರೀಕಾಂತ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಕಿರಿಯ ಸಹೋದರ.
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಶಿವಸೇನಾದಿಂದ ಬಂಡಾಯವೆದ್ದು ಹೊರನಡೆದಿದ್ದ ಏಕನಾಥ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.