ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್ನ ವೆಬ್ಸೈಟ್ ಹ್ಯಾಕ್ ಮಾಡಿ, ನಕಲಿ ವೆಬ್ಸೈಟ್ ಸೃಷ್ಟಿಸಿ ಅನಧಿಕೃತ ಪೋಸ್ಟ್ಗಳನ್ನು ಹಾಕಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಧರ್ಮೇಶ್ ಜೂನ್, ಅರುಣ್, ಸಿದ್ದಾರ್ಥ ಮತ್ತು ವೆಂಕಟೇಶ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಆರೋಪಿಗಳು ಹಾಸನ ಮೂಲದ ಕಂಪನಿಯೊಂದರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈತ ಬಿಜೆಪಿಯೊಂದಿಗೆ ಕೆಲಸ ಮಾಡುವ ರಾಜಕೀಯ ತಂತ್ರ ಸಂಸ್ಥೆಯಾದ ವರಾಹೆ ಅನಾಲಿಟಿಕ್ಸ್ ಜೊತೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಈತನ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಸಕ್ತ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ನ ವೆಬ್ಸೈಟ್ ಅನ್ನು ಹ್ಯಾಕ್ ಮಾಡಲಾಗಿತ್ತು. ಈ ಕುರಿತು ಕಾಂಗ್ರೆಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ನೀಡಿತ್ತು. ಈ ಹಿನ್ನೆಲೆ ಪೊಲೀಸರು ಶೋಧಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ನಕಲಿ ವೆಬ್ಸೈಟ್ನ ಹೋಸ್ಟಿಂಗ್ ವಿವರ, ನೋಂದಣಿ, ಲಾಗಿನ್ ಪಾಸ್ವರ್ಡ್ ಪಡೆದು ಪರಿಶೀಲಿಸಿದಾಗ ಬೆಂಗಳೂರಿನ M/S ವೆಟ್ ಫ್ಯಾಬ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಕಲಿ ವೆಬ್ಸೈಟ್ ಸೃಷ್ಟಿ ಮಾಡಿರುವುದು ತಿಳಿದುಬಂದಿದೆ.
ಈ ಸಂಸ್ಥೆಯು ನಕಲಿ ವೆಬ್ಸೈಟ್ ಅನ್ನು ಸೃಷ್ಟಿಸುವುದರ ಜೊತೆಗೆ ಸುಳ್ಳು ಮಾಹಿತಿಯನ್ನು ಹರಡುವ ಕೆಲಸವನ್ನು ಮಾಡಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಫೆಬ್ರವರಿ ತಿಂಗಳಲ್ಲಿ ವೆಬ್ಸೈಟ್ ಹ್ಯಾಕ್ ಮಾಡಿದ್ದರು. ನಂತರ ಕೆಪಿಸಿಸಿ ಇನ್ ಅನ್ನೋ ನಕಲಿ ವೆಬ್ಸೈಟ್ನ ಮುಖಪುಟದಲ್ಲಿ ಇದು ಭ್ರಷ್ಟರ ಪಕ್ಷ. ಭ್ರಷ್ಟ ರಾಜ್ಯವನ್ನಾಗಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಇಡೀ ಕಾಂಗ್ರೆಸ್ ಮೇಲಿನ ಆರೋಪಗಳ ಪಟ್ಟಿಯನ್ನೇ ಈ ವೆಬ್ಸೈಟ್ನಲ್ಲಿ ಹಾಕಲಾಗಿತ್ತು. ಮುಖಪುಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ಫೋಟೋ ಬಳಸಲಾಗಿತ್ತು. ಇನ್ನು ಇತರ ಪುಟಗಳಲ್ಲಿ ಕಾಂಗ್ರೆಸ್ ಮೇಲಿನ ಆರೋಪಗಳು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ, ಕೋಮುಗಲಭೆ ಸೇರಿದಂತೆ ಹಲವು ವಿವಾದಾತ್ಮಕ ಸಂಗತಿಗಳನ್ನು ಪೋಸ್ಟ್ ಮಾಡಲಾಗಿತ್ತು.