ಹೊಸದಿಗಂತ ವರದಿ,ಮೈಸೂರು:
ಶ್ವಾನದೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳದ ಕತ್ತಿನಲ್ಲಿದ್ದ ಚಿನ್ನದ ಸರವನ್ನು ದೋಚಿದ್ದ ನಾಲ್ವರು ಕಳ್ಳರನ್ನು ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ರಾಣೆಬೆನ್ನೂರಿನ ನಾಗರಾಜು (28), ದಾವಣಗೆರೆಯ ನವೀನ್ ಕುಮಾರ್ (19), ಆಯಿಷಾ (34), ಕುಮುದಾ (32) ಬಂಧಿತ ಆರೋಪಿಗಳು.
ಮೈಸೂರಿನ ಜೆಎಲ್ ಬಿ ರಸ್ತೆಯ ಅಪೂರ್ವ ಹೋಟೆಲ್ ಬಳಿ ತಮ್ಮ ಶ್ವಾನದೊಂದಿಗೆ ವಾಯುವಿಹಾರಕ್ಕೆ ತೆರಳಿದ್ದ ಯುವತಿ ಸೌಮ್ಯ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಕಾರಿನಲ್ಲಿ ಬಂದಿದ್ದ ಈ ನಾಲ್ವರು ಆರೋಪಿಗಳು ಕಿತ್ತುಕೊಂಡಿದ್ದರು.
ಈ ಆರೋಪಿಗಳು ಕಾರಿನಲ್ಲಿ ಬೆಂಗಳೂರಿನಲ್ಲಿ ಸರಗಳ್ಳತನಕ್ಕೆ ಯತ್ನಿಸಿ ವಿಫಲರಾಗಿ ಮೈಸೂರಿಗೆ ಬಂದಿದ್ದರು. ಶ್ವಾನದ ಜೊತೆ ವಾಯು ವಿಹಾರಕ್ಕೆ ತೆರಳಿದ್ದ ಸೌಮ್ಯಾ ಅವರ 10ಗ್ರಾಂ ತೂಕದ ಸರ ದೋಚುವಾಗ, ಸರವನ್ನು ಕೈಹಿಯಿಂದ ಭದ್ರವಾಗಿ ಸೌಮ್ಯ ಹಿಡಿದುಕೊಂಡು ಕೂಗಿಕೊಂಡರು. ಅಲ್ಲದೇ ಕಾರಿನ ಚಾಲಕನಿಗೆ ನಾಯಿ ಬೆದರಿಸಲೆಂದು ತಂದಿದ್ದ ಕೋಲಿನಿಂದ ಹೊಡೆದಿದ್ದರು. ಇದರಿಂದಾಗಿ ಸ್ವಲ್ಪ ಪ್ರಮಾಣದ ಚಿನ್ನ ಸೌಮ್ಯಾ ಅವರ ಬಳಿಯೇ ಉಳಿದುಕೊಂಡಿತ್ತು. ಅಷ್ಟೇ ಅಲ್ಲ ಕಾರಿನ ನಂಬರ್ ಕೂಡಾ ಗುರುತಿಸಿ, ಅದನ್ನು ಪೊಲೀಸರಿಗೆ ಮಾಹಿತಿ ನೀಡಿದರು. ಕಾರ್ಯಚರಣೆ ನಡೆಸಿದ ಪೊಲೀಸರು ಈ ನಾಲ್ವರು ಕಳ್ಳರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.