ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಮುಂಜಾನೆ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮುಂಬೈಗೆ ತೆರಳುತ್ತಿದ್ದ ಖಾಸಗಿ ಪ್ರಯಾಣಿಕರ ಬಸ್ಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿ, 22 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಪುಣೆಯ ಜಂಭುಲ್ವಾಡಿಯಲ್ಲಿ ಟ್ರಕ್ನ ಬ್ರೇಕ್ ವೈಫಲ್ಯದ ಶಂಕೆಯಿಂದ ನಾರ್ಹೆ ಅಂಬೇಗಾಂವ್ನ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಮುಂಜಾನೆ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಲ್ಹಾಪುರದಿಂದ ಮುಂಬೈನ ಡೊಂಬಿವಿಲಿಗೆ ಬಸ್ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು.
ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್ಪೆಕ್ಟರ್ ವಿಜಯ್ ಕುಂಬಾರ್ ತಿಳಿಸಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ. ಗಾಯಗೊಂಡ 22 ಮಂದಿಯಲ್ಲಿ 19 ಮಂದಿ ಬಸ್ ಪ್ರಯಾಣಿಕರಾಗಿದ್ದರೆ, ಮೂವರು ಟ್ರಕ್ನ ಕ್ಯಾಬಿನ್ನಲ್ಲಿದ್ದರು. ಡಿಕ್ಕಿ ಹೊಡೆದ ನಂತರ ಟ್ರಕ್ ರಸ್ತೆ ಬದಿಗೆ ಸರಿದಿದೆ.
ಬಸ್ನ ಭಾರೀ ಹಾನಿಗೊಳಗಾದ ರಚನೆಯೊಳಗೆ ಸಿಲುಕಿದ್ದ 18 ಪ್ರಯಾಣಿಕರನ್ನು ರಕ್ಷಕರು ಹೊರತೆಗೆದಿದ್ದಾರೆ ಎಂದು ಪುಣೆ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.