ಹೊಸದಿಗಂತ ವರದಿ, ವಿಜಯನಗರ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಶುಕ್ರವಾರ ಬೆಳಗಿನಜಾವ ನಡೆದಿದೆ.
ಡಿ.ವೆಂಕಟ್ ಪ್ರಶಾಂತ್(42), ಡಿ.ಚಂದ್ರಕಲಾ (38), ಎಚ್.ಎಂ.ಆದ್ವಿಕ್ (16), ಪ್ರೇರಣಾ (8) ಮೃತರು. ಪಟ್ಟಣದ 6ನೇ ವಾರ್ಡ್ ನಿವಾಸಿ ರಾಘವೇಂದ್ರ ಶೆಟ್ಟಿ ಅವರ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸಂಭವಿಸಿದ್ದು, ಇದರಿಂದ ಮನೆಯಲ್ಲಿನ ಎಸಿ ಸ್ಫೋಟಗೊಂಡಿದೆ.
ಮನೆ ಮಾಲೀಕ ರಾಘವೇಂದ್ರ ಶೆಟ್ಟಿ ಹಾಗೂ ಪತ್ನಿ ರಾಜಶ್ರೀ ಅವರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಮೊದಲ ಮಹಡಿಯಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ ಅವರ ಮಗ ವೆಂಕಟ್, ಅವರ ಪತ್ನಿ ಚಂದ್ರಕಲಾ, ಅವರ ಮಕ್ಕಳಾದ ಆದ್ವಿಕ್, ಪ್ರೇರಣಾ ನಾಲ್ವರೂ ಮನೆಯಿಂದ ಹೊರ ಬರಲಾಗದೇ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಬೆಂಕಿಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ, ಪ್ರಕರಣ ಮರಿಯಮ್ಮನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ. ನಾಲ್ವರ ಮೃತ ದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹವಾನಿಯಂತ್ರಿತ (ಎಸಿ)ಗೆ ಬೆಂಕಿ ತಗುಲಿದ ಹಿನ್ನೆಲೆ ವಿಷ ಅನಿಲ ಸೊರಿಕೆಯಿಂದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ