ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ ಟೀಂ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ತಂಡದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೆ ಭಾರತದಲ್ಲಿ ಸಂಕಷ್ಟ ಎದುರಾಗಿದೆ. ಬರೋಬ್ಬರಿ 450 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಶುಭ್ಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಈ ಪ್ರಕರಣದಲ್ಲಿ ಶುಭ್ಮನ್ ಗಿಲ್ ಅಲ್ಲದೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಅವರಿಗೂ ಗುಜರಾತ್ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿಯಿಂದ ಸಮನ್ಸ್ ಕಳುಹಿಸಲಾಗಿದೆ.
ವಾಸ್ತವವಾಗಿ ಭೂಪೇಂದ್ರಸಿನ್ಹ್ ಝಾಲಾ ನೇತೃತ್ವದ ಬಿಝಡ್ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪನಿ, ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದೆ. ಆದರೆ ಕೊಟ್ಟ ಮಾತಿನಂತೆ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರ ನೀಡುವಲ್ಲಿ ಕಂಪನಿ ವಿಫಲವಾದ ಕಾರಣ ಇದೀಗ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಹಮದಾಬಾದ್ ಮಿರರ್ ವರದಿ ಪ್ರಕಾರ, ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯುವ ಆಟಗಾರರಾದ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಪೊಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಇದೀಗ ಈ ನಾಲ್ವರು ಕ್ರಿಕೆಟಿಗರನ್ನು ವಿಚಾರಣೆ ನಡೆಸಲಿದೆ. ವರದಿಯ ಪ್ರಕಾರ, ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಗಿಲ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವುದರಿಂದ, ಅವರು ದೇಶಕ್ಕೆ ಹಿಂದಿರುಗಿದ ನಂತರ ಸಿಐಡಿ ಅವರನ್ನು ಪ್ರಶ್ನಿಸಬಹುದು.