ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಭಾರತೀಯ ಪ್ರವಾಸಿಗರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಬಿಮಲಚಂದ್ರ ಅಗರವಾಲ್ (40), ಸಾಧನಾ ಅಗರವಾಲ್ (35), ಸಂಧ್ಯಾ ಅಗರವಾಲ್ (40), ರಾಕೇಶ್ ಅಗರವಾಲ್ (55) ಎಂದು ಗುರುತಿಸಲಾಗಿದೆ. ತೀವ್ರವಾಗ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೇಪಾಳದ ಚಾಲಕ ದಿಲ್ ಬಹದ್ದೂರ್ ಬಾಸ್ನೆಟ್ (36) ಸಹ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಪ್ರವಾಸಿಗರು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದಲ್ಲಿರುವ ಪೊಖರಾ ಎಂಬ ರಮಣೀಯ ಪ್ರದೇಶಕ್ಕೆ ಭೇಟಿ ನೀಡಿ ಕಠ್ಮಂಡುವಿಗೆ ಹಿಂತಿರುಗುತ್ತಿದ್ದರು. ಕಠ್ಮಂಡುವಿನಿಂದ ಧಾಡಿಂಗ್ ಕಡೆಗೆ ಬರುತ್ತಿದ್ದ ಬಸ್ ಠಾಕ್ರೆ ಪ್ರದೇಶದ ಪೃಥ್ವಿ ಹೆದ್ದಾರಿಯಲ್ಲಿ ಪ್ರವಾಸಿಗರಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪರ್ವತಗಳಿಂದ ಆವೃತವಾಗಿರುವ ನೇಪಾಳದಲ್ಲಿ ರಸ್ತೆ ಅಪಘಾತಗಳು ತುಂಬಾ ಸಾಮಾನ್ಯವಾಗಿದೆ. ದೇಶದ ಹೆಚ್ಚಿನ ರಸ್ತೆಗಳು ಕಿರಿದಾಗಿದೆ. ಕಳಪೆ ರಸ್ತೆಗಳ ಕಾರಣದಿಂದಾಗಿ ಆಗಾಗ್ಯೆ ವಾಹನಗಳ ನಡುವೆ ಅಪಘಾತ ಘಟನೆಗಳು ಸಂಭವಿಸುತ್ತಲೇ ಇರುತ್ತವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ