ಹೊಸದಿಗಂತ ವರದಿ, ಮಳವಳ್ಳಿ :
ಕಾವೇರಿ ನದಿಯಲ್ಲಿ ಈಜಲು ಹೋದ ನಾಲ್ವರು ನೀರು ಪಾಲಾಗಿರುವ ಘಟನೆ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.
ಮೈಸೂರಿನ ಕನಕಗಿರಿಯ ನಾಲ್ವರು ನೀರು ಪಾಲಾಗಿದ್ದು, ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂಡಿ ಮುತ್ತತ್ತಿ ಮುತ್ತುರಾಯನ ವಿಶೇಷ ಪೂಜೆಗೆ ತೆರಳಿದ ಸಂದರ್ಭದಲ್ಲಿ ದುರಂತ ಸಂಭವಿಸಿದೆ.
ನಾಗೇಶ್ (40), ಭರತ್ (17), ಗುರುಕುಮಾರ್ (32) ಹಾಗೂ ಮಹದೇವ್ (16) ಕಾವೇರಿ ನದಿಯಲ್ಲಿ ನಿರುಪಾಲಾದ ದುರ್ದೈವಿಗಳಾಗಿದ್ದಾರೆ.
ಮೈಸೂರಿನಿಂದ ಧಾರ್ಮಿಕ ಕಾರ್ಯ ನಿಮಿತ್ತ 40 ರಿಂದ 50 ಮಂದಿ ಬಸ್ನಲ್ಲಿ ಮುತ್ತತ್ತಿಗೆ ತೆರಳಿದ್ದರು, ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಲು ನೀರಿಗೆ ಇಳಿದಿದ್ದರು, ನೀರಿನ ಸೆಳೆತಕ್ಕೆ ಓರ್ವ ಸಿಲುಕಿದ್ದು ಈತನ ರಕ್ಷಣೆಗೆ ಮುಂದಾದಾಗ ನಾಲ್ವರು ಸಹ ನೀರು ಪಾಲಾಗಿದ್ದಾರೆ.
ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಕ್ಕೆ ಶೋಧ ನಡೆದಿದೆ. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.