ಹೊಸ ದಿಗಂತ ವರದಿ, ಮಂಡ್ಯ :
ಹಣ ದ್ವಿಗುಣಗೊಳಿಸುವುದಾಗಿ ಮಹಿಳೆಯನ್ನು ನಂಬಿಸಿ 70 ಲಕ್ಷ ರೂ. ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ ಕುಪ್ಪಂ ನಿವಾಸಿ ಶಿವ. ಬಿ. ಅಲಿಯಾಸ್ ಶಿವಬುಡ್ಡಪ್ಪ ಅಲಿಯಾಸ್ ಸೂರ್ಯ ಆಲಿಯಾಸ್ ಅಜಯ್ ಅಲಿಯಾಸ್ ಗೋವರ್ಧನ್ ಅಲಿಯಾಸ್ ಸಾಂಭಶಿವ (42) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಆಂಧ್ರದ ಕುಪ್ಪಂ ನಿವಾಸಿ ಶಿವ ಚಾಮರಾಜನಗರ ಸಿಂಗಾನಲ್ಲೂರು ಗ್ರಾಮದ ಮಹಿಳೆಯನ್ನು ಮದುವೆಯಾಗಿ ವಾಸವಾಗಿದ್ದ ಈತ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಂಷಾಪುರ ಗ್ರಾಮದ ಎಸ್. ಮೇರಿ ಎಂಬಾಕೆಯನ್ನು ನಂಬಿಸಿ ವಂಚಿಸಿದ್ದ. ಶಿವ ಅಲಿಯಾಸ್ ಸಾಂಭಶಿವ ಮಳವಳ್ಳಿ ತಾಲೂಕು ಹೆಬ್ಬಣಿ ಗ್ರಾಮದ ಶ್ರೀ ನಿರ್ವಾಣೇಶ್ವರ ವಿರಕ್ತ ಮಠದ ಶ್ರೀ ಶಂಭುಲಿಂಗಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದ. ಅವರ ಮೂಲಕ ಶಿಂಷಾಪುರ ಗ್ರಾಮದ ಶ್ಯಾಲೋಮ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ಗೆ ಸೇರಿದ ಎಸ್. ಮೇರಿ ಅವರನ್ನು ಪರಿಚಯಿಸಿಕೊಂಡಿದ್ದು, ಬಳಿಕ ಆಕೆಗೆ 1 ಕೋಟಿ ರೂ. ಹಣ ನೀಡಿದರೆ ನಾನು 25 ಕೋಟಿಯಾಗಿ ದುಪ್ಪಟ್ಟು ಹಣ ಮಾಡಿಕೊಡುವುದಾಗಿ ನಂಬಿಸಿದ್ದ. ಈ ವೇಳೆ ನೋಟಿನ ಅಳತೆಗೆ ಬಿಳಿ ಪೇಪರ್ಗಳನ್ನು ಕಟ್ ಮಾಡಿ ಸಿದ್ಧಪಡಿಸಿಕೊಂಡು ಒಂದು ಚೀಲದಲ್ಲಿ ತಂದಿದ್ದ. ಈ ಸಂದರ್ಭದಲ್ಲಿ ಜಾದೂ ಪ್ರದರ್ಶನದ ಮಾದರಿ ತೋರಿಸಿ ನಂಬಿಸಿದ್ದ.
ಈತನನ್ನು ನಂಬಿದ ಎಸ್. ಮೇರಿ ಅವರು ತನ್ನ ಸ್ನೇಹಿತರು, ಬಂಧುಗಳಿಂದ ಹಣವನ್ನು ಸಾಲ ಪಡೆದು ಸುಮಾರು 70 ಲಕ್ಷ ಸಂಗ್ರಹಿಸಿದ್ದರು. ಬಳಿಕ ಜ. 1ರಂದು ಹಣ ಕೊಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡು, ಆತನಿಗೆ ಹಣ ನೀಡಿದ್ದರು. ಹಣ ಪಡೆದುಕೊಂಡು ಆತ ಪರಾರಿಯಾಗಿದ್ದ. ಈ ಬಗ್ಗೆ ಮೇರಿ ಅವರು ಪ್ರಕರಣ ದಾಖಲಿಸಿದ್ದರು.