ಹೊಸ ದಿಗಂತ ವರದಿ, ಶಿರಸಿ :
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅವಗಡ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಜನರಿಗೆ ತೊಂದರೆಯಾದರೆ ರಕ್ಷಣೆಗೆ ಕಾರ್ಯಪಡೆ ಸಜ್ಜಾಗಿಡಲು ಸೂಚಿಸಲಾಗಿದ್ದು, ಕಾಳಜಿ ಕೇಂದ್ರ ತೆರೆಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಮಳೆಯ ಕಾರಣದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದರು.
ಕಳೆದ ಬಾರಿ ಮಳೆ ಹಾನಿಗೆ 200ಕೋಟಿ ರೂ.ಗಳನ್ನು ಸರಕಾರ ನೀಡಿದೆ. ಇಷ್ಟೊಂದು ಹಣವನ್ನು ಯಾವ ಜಿಲ್ಲೆಗೂ ನೀಡಿಲ್ಲ. ಅದರ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆಗಬೇಕಾದ್ದು ಇದೆ. ಈ ಬಾರಿಯೂ ಮಳೆಯಿಂದ ಹಾನಿಯಾದ ಕಡೆಗಳಲ್ಲಿ ಪರಿಹಾರ ಒದಗಿಸಲಾಗುತ್ತದೆ. ಜುಲೈ 7ನೇ ತಾರೀಕಿಗೆ ಎಲ್ಲ ಇಲಾಖೆಗಳ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.