ಹೊಸದಿಗಂತ ಡಿಜಿಟಲ್ ಡೆಸ್ಕ್:
“ಪ್ರಧಾನಿ ಪ್ರಯೋಗಾಲಯ” ದಲ್ಲಿನ ಹೊಸ ಪ್ರಯೋಗದಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯವು ಅಪಾಯದಲ್ಲಿದೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
“ಪ್ರತಿ ವರ್ಷ 60,000 ಸೈನಿಕರು ನಿವೃತ್ತಿ ಹೊಂದುತ್ತಿದ್ದು, ಈ ಪೈಕಿ 3,000 ಮಂದಿಗೆ ಮಾತ್ರ ಸರಕಾರಿ ನೌಕರಿ ಸಿಗುತ್ತಿದೆ. 4 ವರ್ಷಗಳ ಗುತ್ತಿಗೆ ಪಡೆದು ನಿವೃತ್ತರಾಗುತ್ತಿರುವ ಸಾವಿರಾರು ಅಗ್ನಿವೀರರ ಭವಿಷ್ಯ ಏನಾಗಲಿದೆ? ಪ್ರಧಾನಿಯವರ ಪ್ರಯೋಗಾಲಯದಲ್ಲಿನ ಈ ಹೊಸ ಪ್ರಯೋಗದಿಂದ ದೇಶದ ಭದ್ರತೆ ಮತ್ತು ಯುವಜನರ ಭವಿಷ್ಯ ಅಪಾಯದಲ್ಲಿದೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಕಾಂಗ್ರೆಸ್ ಮತ್ತು ಗಾಂಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಗ್ನಿಪಥ ಯೋಜನೆ ಬಗ್ಗೆ ಚರ್ಚಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕೆಸಿ ವೇಣುಗೋಪಾಲ್ ಮತ್ತು ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ಪ್ರತಿಪಕ್ಷ ಸದಸ್ಯರು ರಕ್ಷಣಾ ಸಂಸದೀಯ ಸಮಿತಿಯ ಸಭೆಯಿಂದ ಪ್ರತಿಭಟಿಸಿ ಹೊರನಡೆದಿದ್ದರು ಎಂದು ಮೂಲಗಳು ವರದಿ ಮಾಡಿವೆ.