ಹೊಸದಿಗಂತ ಡಿಜಿಟಲ್ಡೆಸ್ಕ್:
ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುವ ವಿನಾಯಕ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಗಲ್ಲಿ ಗಲ್ಲಿಯಲ್ಲೂ ಗಣೇಶ ಕೂರಿಸಲು ವೇದಿಕೆ ಸಿದ್ದವಾಗಿವೆ. ಈ ಬಾರಿ ಯುಪಿಯ ಚಂಡೌಸಿಯಲ್ಲಿ ತಯಾರಾಗುತ್ತಿರುವ ಗಣಪತಿ ದೇಶದಲ್ಲೇ ವಿಶೇಷ ಆಕರ್ಷಣೆಯಾಗಿ ನಿಂತಿದೆ. ಸ್ವರ್ಣಕಾಂತಿಯಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ.
ತಿರುಪತಿ ತಿಮ್ಮಪ್ಪನ ಶೈಲಿಯಲ್ಲಿ 18 ಅಡಿ ಚಿನ್ನದ ಗಣೇಶನ ಮೂರ್ತಿಯನ್ನು ತಯಾರಿಸಲಾಗುತ್ತಿದೆ. 18 ಅಡಿಯ ವಿಗ್ರಹವನ್ನು ವಿವಿಧ ಆಕಾರಗಳಲ್ಲಿ ಚಿನ್ನದಿಂದ ಮಾಡಲಾಗಿದೆ. ತಿರುಮಲ ಶ್ರೀವಾರಿಯ ಶೈಲಿಯಲ್ಲಿ ಚಿನ್ನದ ಆಭರಣಗಳನ್ನು ಅಲಂಕರಿಸಲಾಗಿದೆ. ಚಿನ್ನದ ಗಣಪಯ್ಯ ಮೂರ್ತಿ ತಯಾರಿಗೆ ಸಿದ್ಧತೆಗಳು ವೇಗವಾಗಿ ನಡೆಯುತ್ತಿವೆ. 18 ಅಡಿ ಚಿನ್ನದ ಗಣೇಶನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮತ್ತೊಂದೆಡೆ, ಸಾರಸ್ವತ ಬ್ರಾಹ್ಮಣ ಸೇವಾ ಮಂಡಲವು ಮುಂಬೈನಲ್ಲಿ ಶ್ರೀಮಂತ ಗಣೇಶ ಮಂಟಪವನ್ನು ಸ್ಥಾಪಿಸುತ್ತಿದೆ. ಮುಂಬೈನ ಕಿಂಗ್ ಸರ್ಕಲ್ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಮಂಟಪಕ್ಕೆ 316.40 ಕೋಟಿ ವಿಮೆ ಮಾಡಲಾಗಿತ್ತು. ಗಣೇಶ ಮಂಟಪ, ವಿಗ್ರಹ, ಆಭರಣಗಳು, ಸ್ವಯಂಸೇವಕರು, ಕೆಲಸಗಾರರು, ಹಣ್ಣುಗಳು, ತರಕಾರಿಗಳು, ದಿನಸಿ, ಪೀಠೋಪಕರಣಗಳಿಗೆ ಈ ವಿಮಾ ರಕ್ಷಣೆ ಅನ್ವಯಿಸುತ್ತದೆ. ಗಣೇಶನ ವಿಗ್ರಹವನ್ನು ಚಿನ್ನ ಮತ್ತು ಇತರ ಅಮೂಲ್ಯ ಆಭರಣಗಳಿಂದ ಸುಂದರವಾಗಿ ಅಲಂಕರಿಸಲಾಗುವುದು. ಈ ಬಾರಿ ಮಹಾ ಗಣಪತಿಯನ್ನು 66 ಕೆ.ಜಿ.ಗೂ ಅಧಿಕ ತೂಕದ ಚಿನ್ನಾಭರಣ, 295 ಕೆ.ಜಿ ಬೆಳ್ಳಿ ಆಭರಣ ಹಾಗೂ ಇತರೆ ಅಮೂಲ್ಯ ವಸ್ತುಗಳಿಂದ ಅಲಂಕರಿಸಲಾಗಿದೆ ಎಂದು ಜಿಎಸ್ಬಿ ಸೇವಾ ಮಂಡಳಿ ತಿಳಿಸಿದೆ.