ಹೊಸದಿಗಂತ ವರದಿ,ಮಂಡ್ಯ:
ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮನೆಯಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ತುಂಬಗೆರೆ ಗ್ರಾಮದಲ್ಲಿ ನಡೆದಿದೆ.
ಹನಕೆರೆ ಗ್ರಾ.ಪಂ.ಸದಸ್ಯೆ ರಾಣಿ ಎಂಬುವವರ ಮನೆಯಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದ ಮನೆಯಲ್ಲಿದ್ದ ಸುಮಾರು 1 ಲಕ್ಷ ರೂಪಾಯಿಗೂ ಹೆಚ್ಚು ವಸ್ತುಗಳ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಬೆಳಿಗ್ಗೆ 8.30 ಗಂಟೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟೌವ್ಗೆ ಬೆಂಕಿ ಹೊತ್ತಿಸಿದಾಗ ಸಿಲಿಂಡರ್ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಮನೆ ಮುಂದಿನ ಬಾಗಿಲು, ಸ್ಕೂಟರ್, ಸೈಕಲ್, ನೀರಿನ ಟ್ಯಾಂಕ್ ಹಾಗೂ ಬಟ್ಟ್ಟೆಗಳು ಭಾಗಶಃ ಬೆಂಕಿಗೆ ಅಹುತಿಯಾಗಿವೆ.
ಘಟನೆಯಲ್ಲಿ ಗ್ರಾ.ಪಂ.ಸದಸ್ಯ ರಾಣಿ ಹಾಗೂ ಮಕ್ಕಳಿಗೆ ಬೆಂಕಿಯ ತಾಪ ತಗುಲಿ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಗ್ರಾಮಸ್ಥರು ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಅನ್ನು ಮನೆಯಿಂದ ಹೊರ ತಂದು ನೀರಿಗೆ ಹಾಕಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ತಕ್ಷಣ ವಿಷಯ ತಿಳಿದ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು.