ಹೊಸದಿಗಂತ ವರದಿ,ಶಿವಮೊಗ್ಗ :
ನನ್ನ ನಿರ್ದೇಶನ-ನಿರ್ಮಾಣದ ಬಹು ನಿರೀಕ್ಷಿತ ಚಿತ್ರ “ಗೌರಿ” ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗೌರಿ ಚಿತ್ರಕ್ಕಾಗಿ ನನ್ನ ಸಿನಿಮಾ ಜೀವನದ ಅನುಭವವನ್ನು ಧಾರೆ ಎರೆದಿದ್ದೇನೆ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಹೊಸಬರಿಗೆ ಇಲ್ಲಿ ಅವಕಾಶ ಕೊಟ್ಟಿದ್ದೇನೆ. ಕನಸುಗಣ್ಣಿನ ಪ್ರತಿಭೆಗಳು ಈ ಚಿತ್ರದ ಮೂಲಕ ಅನಾವರಣಗೊಂಡಿದ್ದಾರೆ. ನಾಯಕನ ಪಾತ್ರದಲ್ಲಿ ನನ್ನ ಮಗ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿಯ ಪಾತ್ರದಲ್ಲಿ ಕಿರುತೆರೆಯ ನಟಿ ಸಾನ್ಯ ಅಯ್ಯರ್ ಅಭಿನಯಿಸಿದ್ದಾರೆ ಎಂದರು.
ಗೌರಿ ಸಿನಿಮಾ ನನ್ನ ಅಕ್ಕನ ಜೀವನ ಕುರಿತ ಚಿತ್ರವಲ್ಲ. ಅದು ಅವಳ ಆತ್ಮಕತೆಯೂ ಅಲ್ಲ, ಗೌರಿ ಎಂಬುವುದು ಒಂದು ಪಾತ್ರ ಮಾತ್ರ. ಇದು ನೈಜ ಘಟನೆಯನ್ನು ಆಧರಿಸಿದೆ. ಅಕ್ಕನ ನೆನಪಿನಲ್ಲಿ ಈ ಹೆಸರು ಇಟ್ಟಿದ್ದೇನೆ. ಹಾಗೆ ನೋಡಿದರೆ, ಅಕ್ಕ ಗೌರಿ ಕುರಿತ ಚಲನಚಿತ್ರ ಮಾಡುವುದು ತುಂಬ ಕಷ್ಟ ಎಂದು ಸ್ಪಷ್ಟನೆ ನೀಡಿದರು.
ಹಳಬರು ಹೊಸಬರು ಸೇರಿದಂತೆ ಸುಮಾರು 70 ಜನರು ಈ ಚಿತ್ರದಲ್ಲಿ ಅಭಿನುಸಿದ್ದಾರೆ. ಪ್ರಿಯಾಂಕ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಅಕುಲ್ ಬಾಲಾಜಿ ಹೀಗೆ ಪಟ್ಟಿ ದೊಡ್ಡದಿದೆ ಎಂದರು.