May 8, 2026
Friday, May 8, 2026
spot_img

ಮಳೆಗಾಲದ ನಡುವೆಯೇ ಜಿಬಿಎ ಸಮರ: ಶೀಘ್ರದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀರ್ಘ ಕಾಲದಿಂದ ಕುತೂಹಲ ಮೂಡಿಸಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸರ್ವಸನ್ನದ್ಧವಾಗಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚುನಾವಣೆ ಪ್ರಕ್ರಿಯೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದ್ದು, ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಜೂನ್ 30ರ ಒಳಗಾಗಿ ಜಿಬಿಎ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ಚುನಾವಣೆ ನಡೆಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲು ಆಯೋಗ ಮುಂದಾಗಿದೆ. ಸಭೆಯ ಬಳಿಕ ಮಾತನಾಡಿದ ಆಯುಕ್ತ ಸಂಗ್ರೇಶಿ ಅವರು, “ಚುನಾವಣೆಗೆ ಸಂಬಂಧಿಸಿದ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈಗ ಕೇವಲ ಮತದಾನದ ದಿನಾಂಕವನ್ನು ಘೋಷಿಸುವುದು ಮಾತ್ರ ಬಾಕಿ ಇದೆ,” ಎಂದು ತಿಳಿಸಿದರು.

ಚುನಾವಣಾ ದಿನಾಂಕದ ಬಗ್ಗೆ ಸೂಚನೆ ನೀಡಿದ ಆಯುಕ್ತರು, ಜೂನ್ 14 ರಿಂದ ಜೂನ್ 24ರ ಒಳಗಾಗಿ ಸೂಕ್ತ ದಿನಾಂಕವೊಂದನ್ನು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಅಂತಿಮ ದಿನಾಂಕವನ್ನು ಜನತೆಗೆ ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಪ್ರಮುಖ ಗಮನಕ್ಕೆ: “ಚುನಾವಣೆಯನ್ನು ಮುಂದೂಡುವ ಅಥವಾ ತಡೆಹಿಡಿಯುವ ಅಧಿಕಾರ ಕೇವಲ ಸುಪ್ರೀಂಕೋರ್ಟ್‌ಗೆ ಮಾತ್ರ ಇದೆ. ಆಯೋಗವು ಕೋರ್ಟ್ ನೀಡಿರುವ ಗಡುವಿನಂತೆಯೇ ಕಾರ್ಯನಿರ್ವಹಿಸುತ್ತಿದೆ,” ಎಂದು ಸಂಗ್ರೇಶಿ ಅವರು ಪುನರುಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !