– ವಿಜಯಕುಮಾರ ಬೆಳ್ಳೇರಿಮಠ
ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ಏರ್ಪಡಿಸಿರುವ ರಾಷ್ಟ್ರೀಯ ಯುವಜನೋತ್ಸದ ಉದ್ಘಾಟನಾ ಸಮಾರಂಭ ಜ.12ರಂದು ನಡೆಯಲಿದ್ದು, ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಅತ್ಯಾಧುನಿಕ ಜರ್ಮನ ತಂತ್ರಜ್ಞಾನ ಆಧಾರಿತ ವಿಶೇಷ ವೇದಿಕೆ ನಿರ್ಮಿಸಲಾಗುತ್ತಿದೆ.
ಜ. 12 ರಿಂದ ಐದು ದಿನ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ.
ಈಗಾಗಲೇ ರೈಲ್ವೆ ಮೈದಾನದಲ್ಲಿ ಹುಬ್ಬಳ್ಳಿ ಶ್ಯಾಮಿಯಾನ್ದ 100 ಕ್ಕೂ ಹೆಚ್ಚು ಸಿಬ್ಬಂದಿ ವೇದಿಕೆಯ ಸಿದ್ಧತೆ ಹಾಗೂ ಸುಣ್ಣ ಬಣ್ಣದ ಕಾರ್ಯದಲ್ಲಿ ತೊಡಗಿದ್ದಾರೆ. 100X100 ಫೀಟ್ ಪ್ರತ್ಯೇಕ ಪೆಂಡಲ್ ಹಾಕಿದೆ. ಇದರಲ್ಲಿ 40X50 ಫಿಟ್ ಉದ್ದ-ಅಗಲದ ವೇದಿಕೆ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಕುಳಿತುಕೊಳ್ಳುವ ವೇದಿಕೆಯಾಗಿದೆ.
ಇನ್ನೂ 500 ಫುಟ್ ಅಗಲ ಹಾಗೂ 360 ಫೂಟ್ ಉದ್ದದ ವಿಸ್ತೀರ್ಣದ ಇನ್ನೊಂದು ಬೃಹತ್ ಪೆಂಡಲ್ ನಿರ್ಮಿಸಲಾಗುತ್ತಿದ್ದು , 25 ಸಾವಿರ ಜನರು ಕುಳಿತುಕೊಳ್ಳಬಹುದಾಗಿದೆ. ದೇಶದ್ಯಾಂತ ಯುವಜನೋತ್ಸವದಲ್ಲಿ ಭಾಗವಹಿಸಲು ಬರುವ 7 ಸಾವಿರ ಸ್ಪರ್ಧಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಸಹ ಮಾಡಲಾಗುತ್ತಿದೆ.
ಅತ್ಯಾಧುನಿಕ ಜರ್ಮನ ತಂತ್ರಜ್ಞಾನ ಟಾರ್ಪಾಲಿನ್ ಹಾಗೂ ಹ್ಯಾಂಗರ್ಸ್ಗಳಿಂದ ವೇದಿಕೆ ನಿರ್ಮಿಸಲಾಗುತ್ತಿದ್ದು, ಗಾಳಿ, ಮಳೆ, ಬೆಂಕಿ, ಬಿಸಿಲು ಹಾಗೂ ಪ್ರಕೃತಿ ವಿಕೋಪ ತಡೆಯುವ ಸಾಮರ್ಥ್ಯ ಹೊಂದಿದೆ. ನಮ್ಮ ಶ್ಯಾಮಿಯಾನಿಂದ 5 ಬಾರಿ ಪ್ರಧಾನಿ ಮೋದಿಯವರ ಸಮಾರಂಭಕ್ಕೆ ಪೆಂಡಲ್ ಅಳವಡಿಸಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರಪತಿ ಬಂದಾಗಲೂ ಸಹ ನಾವೇ ಪೆಂಡಲ್ ಹಾಕಿದ್ದೇವು ಎಂದು ಹುಬ್ಬಳ್ಳಿ ಶ್ಯಾಮಿಯಾನದ ವ್ಯವಸ್ಥಾಪ ಸುರೇಶ ಕುಲಕರ್ಣಿ ತಿಳಿಸಿದರು.
ತಿಳಿಸಿದರು.
ಸದ್ಯದಲೇ ಪೊರ್ಟ್ಲ್ ಆರಂಭ
ರಾಷ್ಟ್ರೀಯ ಯುವಜನೋತ್ಸವದಲ್ಲಿ 18-19 ಸಾವಿರ ಯುವಕರು ಭಾಗವಹಿಸುವ ಸಾಧ್ಯತೆ ಇದೆ. ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಜಿಲ್ಲಾಡಳಿತದಿಂದ ಸದ್ಯದಲೇ ಪೊರ್ಟ್ಲ್ ತೆರೆಯಲಾಗುತ್ತಿದೆ. ಭಾಗವಹಿಸುವ ಇಚ್ಛಿಸುವ ಯುವಕರು ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಗುರದತ್ತ ಹೆಗಡೆ ತಿಳಿಸಿದ್ದಾರೆ.