ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಲಾಂ ನಬಿ ಆಜಾದ್ ಅವರು ಉಪಕಾರ ಸ್ಮರಣೆ ಮಾಡದೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ದುಃಖದ ಸಂಗತಿ. ಉಪಕಾರ ಸ್ಮರಣೆ ಇಲ್ಲದಿರುವುದಕ್ಕೆ ಇದು ಉದಾಹರಣೆಯಾಗಿದೆ. ದೇಶ ಕಷ್ಟದ ಕಾಲದಲ್ಲಿರುವಾಗ ಗುಲಾಂನಬಿ ಹೀಗೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ, ಗಾಂಧಿ ಕುಟುಂಬದಿಂದ ಬೆಳದಿದ್ದ ಆಜಾದ್, ಪಕ್ಷಕ್ಕೆ ರಾಜಿನಾಮೆ ನೀಡುವ ಮೂಲಕ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
ಭಾರತ್ ಜೋಡೋ ಮೂಲಕ ದೇಶಕ್ಕಾಗಿ ಹೋರಾಟ ಮಾಡುವ ಬಗ್ಗೆ ಉದಯಪುರದಲ್ಲಿ ಚರ್ಚೆ ಮಾಡಲಾಯಿತು. 600 ಜನ ನಾಯಕರ ಉಪಸ್ಥಿತಿ ವೇಳೆ ಆಜಾದ್ ಕೂಡ ಇದ್ದರೂ. ಆಜಾದ್ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿರ್ಧಾರ ಕೈಗೊಳ್ಳುವ ತಂಡದಲ್ಲಿದ್ದರು. ಅವರಿಗೆ ಕಾಂಗ್ರೆಸ್ ಪಕ್ಷ 40 ವರ್ಷದ ಅಧಿಕಾರ ನೀಡಿತ್ತು. ಇದೆಲ್ಲವನ್ನು ಅವರು ಮರೆತಿದ್ದಾರೆ ಎಂದರು.