ಹೊಸದಿಗಂತ ವರದಿ ಶಿವಮೊಗ್ಗ:
ಹಿಂದೂ ಸಮಾಜದಲ್ಲಿ ಒಂದು ದಂಪತಿಗೆ ಒಂದು ಮಗು ಎಂಬ ಅನುಸರಣೆಯನ್ನು ಕೈಬಿಡಬೇಕು ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದ್ದಾರೆ.
ನಗರದ ಗುಂಡಪ್ಪಶೆಡ್ನಲ್ಲಿ ಕುಟುಂಬವೊಂದು ಮಠಕ್ಕೆ ದೇಣಿಗೆಯಾಗಿ ನೀಡಿದ ಮನೆ ಸ್ವೀಕಾರ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಒಂದು ದಂಪತಿಗೆ ಒಂದೇ ಮಗು ಎಂದು ಅನುಸರಣೆ ಮಾಡಲು ಮುಂದಾದ ಹಲವು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿವೆ. ಒಂದು ವೇಳೆ ಮಗು ಅಕಾಲಿಕ ಮರಣಕ್ಕೆ ತುತ್ತಾದರೆ ಆ ಮಗುವಿನ ಪೋಷಕರು ಕೊನೇ ತನಕ ದುಃಖ ಪಡುತ್ತಾರೆ. ಅತಿಯಾದ ದುಃಖದಿಂದ ಅದೇ ವೇದನೆಯಲ್ಲಿ ಅಂತ್ಯವಾದವರೂ ಇದ್ದಾರೆ. ಇಂತಹ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿವೆ ಎಂದರು.
ಹಾಗಾಗಿ ಒಂದು ದಂಪತಿಗೆ ಒಂದು ಮಗು ಎಂಬ ಚಿಂತನೆಯನ್ನು ಎಲ್ಲರೂ ಕೈಬಿಡಬೇಕು. ಒಂದು ಕುಟುಂಬ ಕನಿಷ್ಟ ಮೂರು ಮಕ್ಕಳನ್ನಾದರೂ ಪಡೆಯಲು ಮುಂದಾಗಬೇಕು. ನಮ್ಮ ಅಕ್ಕ ಪಕ್ಕದ ಸಮಾಜಗಳನ್ನು ನೋಡಿದರೆ ಇದರ ಮಹತ್ವ ಅರಿವಾಗುತ್ತದೆ ಎಂದರು.
ಪ್ರಮುಖರಾದ ಟಿ.ಟಿ.ಹೆಗಡೆ, ಅಶೋಕ ಜಿ ಭಟ್ಟ, ಲಕ್ಷ್ಮೀನಾರಾಯಣ, ದೇವೇಂದ್ರ, ಸುಮಾ, ರಮೇಶ್, ಮೋಹನ್ ಹೆಗಡೆ, ಲಕ್ಷ್ಮೀನಾರಾಯಣ ಕಾಶಿ ಇನ್ನಿತರರು ಇದ್ದರು.