ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ದಸರಾದಲ್ಲಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ. ಇನ್ನುಳಿದ ಪಾಸ್ ಗಳನ್ನು ಸಹಿತ ರದ್ದು ಮಾಡಲು ಚಿಂತನೆ ನಡೆಸಲಾಗಿದೆ ಎಂಬುದಾಗಿ ಸಚಿವ ಎಸ್ ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಇಂದು ಮೈಸೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ವಿಶ್ವವಿಖ್ಯಾತ ಮೈಸೂರು ದಸರಾ 2022 ಮಹೋತ್ಸವದ ನೀಡಲಾಗುತ್ತಿದ್ದಂತ ಗೋಲ್ಡ್ ಪಾಸ್ ಅನ್ನು ಈ ಬಾರಿ ರದ್ದು ಪಡಿಸಲಾಗಿದೆ. ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾದ ಗೋಲ್ಡ್ ಪಾಸ್ ನೀಡಲಾಗುತ್ತಿಲ್ಲ. ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ ಎಂದರು.
ಇನ್ನೂ ವಿವಿಐಪಿ ಪಾಸ್ ಹಾಗೂ ಕರ್ತವ್ಯನಿರತ ಪಾಸ್ ಹೊರತುಪಡಿಸಿ ಉಳಿದ ಪಾಸ್ಗಳನ್ನು ರದ್ದು ಮಾಡಲು ಚಿಂತನೆ ನಡೆಸಲಾಗುತ್ತಿದೆ. ಪಾಸ್ಗಳ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್ಗಳಿಂದ ಗೋಲ್ಮಾಲ್ ಉಂಟಾಗುವ ಆರೋಪ ಹಿನ್ನಲೆಯಲ್ಲಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ. ಈ ಬಾರಿ ಅಂತಹ ಯಾವುದೇ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಹೇಳಿದರು.
ನಾಳೆ ದಸರಾ ಗಜಪಯಣ ಆರಂಭವಾಗಲಿದೆ. ಆನೆಗಳನ್ನು ವೀರನ ಹೊಸಹಳ್ಳಿಯಿಂದ ಕರೆ ತರಲಾಗುತ್ತದೆ. ಈ ಬಾರಿ 14 ಆನೆಗಳನ್ನು ಆಯ್ಕೆ ಮಾಡಲಾಗಿದೆ 3 ಆನೆ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಳ್ಳುತ್ತವೆ. ಈ ಬಾರಿ ಚಾಮರಾಜನಗರ ದಸರಾದಲ್ಲೂ ಆನೆ ಪಾಲ್ಗೊಳ್ಳುತ್ತದೆ. ದಸರಾ ಉದ್ಘಾಟಕರ ತೀರ್ಮಾನ ಸಿಎಂಗೆ ವಹಿಸಲಾಗಿದೆ ಎಂದರು.
16 ಕಮಿಟಿಗಳನ್ನು ರಚಿಸಿ, ಐಎಎಸ್ ಅಧಿಕಾರಿ ಒಳಹೊಂಡಂತೆ ಸದಸ್ಯರನ್ನು ಸೇರಿಸಲಾಗುತ್ತೆ. ವಿಶ್ವ ಮಟ್ಟದಲ್ಲಿ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗುತ್ತೆ. ಪ್ರವಾಸೋದ್ಯಮ ಉತ್ತೇಜನ ನೀಡುವ ದೃಷ್ಟಿಯಲ್ಲಿ ಅದ್ಧೂರಿ ದಸರಾ ಆಚರಣೆ ಇರಲಿದೆ. ಶ್ರೀರಂಗಪಟ್ಟಣ ದಸರಾ ಚಾಮರಾಜನಗರ ದಸರಾಗೆ ತಲಾ 1 ಕೋಟಿ ಅನುದಾನ ನೀಡಲಾಗಿದೆ ಎಂಬುದಾಗಿ ಸಚಿವ ಎಸ್ಟಿ.ಸೋಮಶೇಖರ್ ತಿಳಿಸಿದರು.