ಹೊಸದಿಗಂತ ವರದಿ, ಮುಂಡಗೋಡ:
ಪಟ್ಟಣ ಪಂಚಾಯತ ಪೌರ ಕಾರ್ಮಿಕನೊಬ್ಬ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಗಾಂಧಿನಗರದಲ್ಲಿ ಶನಿವಾರ ಜರುಗಿದೆ.
ಪಟ್ಟಣದ ಗಾಂಧಿನಗರದಲ್ಲಿ ವಾಸವಾಗಿರುವ ದೇವಪುತ್ರ ಗರ್ನಾಳ (35)ಎಂಬವನೆ ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕನಾಗಿದ್ದಾನೆ. ಈತನು ಕಳೆದ ಆರು ತಿಂಗಳುಗಳಿಂದ ಅಂದರೆ ಫೆಬ್ರವರಿ 2021 ರಿಂದ ಪಟ್ಟಣ ಪಂಚಾಯತಿಗೆ ಕೆಲಸಕ್ಕೆ ಹೋಗದೆ ಗೈರು ಹಾಜರಾಗಿದ್ದ ಎಂದು ಪಟ್ಟಣ ಪಂಚಾಯತ ಸಿಬ್ಬಂದಿಗಳು ಹೇಳುತ್ತಿರುವುದು ಕಂಡು ಬಂದಿತು. ಮನೆಯಲ್ಲಿ ತಾಯಿ ಮಗ ಇಬ್ಬರೆ ಇರುತ್ತಿದ್ದರು. ಹಾಗು ಮೃತನ ತಾಯಿಗೆ ಬಹಳದಿನಗಳಿಂದ ಅನಾರೋಗ್ಯದ ಸಮಸ್ಯೆ ಇದ್ದು ಆಸ್ಪತ್ರೆಗಾಗಿ ವಿವಿಧ ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ.
ಮನೆಯಲ್ಲಿ ತಾಯಿ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.