ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಬಜಕೂಡ್ಲು ಗೋಲೋಕ ಅಮೃತಧಾರಾ ಗೋಶಾಲೆಯಲ್ಲಿ ಮಾಸ ಶಿವರಾತ್ರಿಯ ದಿನ ಭಾನುವಾರ ಗೋಧೂಳೀ ಲಗ್ನದಲ್ಲಿ ವೇದಮಂತ್ರಘೋಷಗಳೊಂದಿಗೆ `ಗೋಮಯ ಜ್ವಲನ’ ಮಾಡಲಾಯಿತು.
ಹೊಸನಗರ ಶ್ರೀ ಚಂದ್ರಮೌಳೀಶ್ವರ ದೇವರ ಸನ್ನಿಧಿಯಲ್ಲಿ ಫೆ.೨೮ರಂದು ಶ್ರೀಸಂಸ್ಥಾನದವರು ನಡೆಸುವ ಸೋಮ ಸಪರ್ಯಾ ವಿಶೇಷ ಕಾರ್ಯಕ್ರಮದಲ್ಲಿ ಅರ್ಚನೆಗಿರುವ ವಿಭೂತಿ ತಯಾರಿಗಾಗಿ ಬಜಕೂಡ್ಲು ಗೋಶಾಲೆಯಲ್ಲಿ ಕಳೆದ ಕೆಲವು ದಿನಗಳಿಂದ ಶುದ್ಧ ದೇಶೀಯ ತಳಿಯ ಗೋವಿನ ಸಗಣಿಯಿಂದ ಬೆರಣಿಯನ್ನು ತಯಾರಿಸಲಾಗಿತ್ತು. ಕೆಲವು ಮಂದಿ ತಮ್ಮ ಮನೆಗಳಲ್ಲಿಯೂ ಬೆರಣಿಯನ್ನು ತಯಾರಿಸಿ ನೀಡಿದ್ದರು. ಸಂಜೆ ಗುರುವಂದನೆ, ಗೋಪೂಜೆ, ಗೋಪಾಲಕೃಷ್ಣಪೂಜೆ, ಶತರುದ್ರ ಪಾರಾಯಣ, ಶಿವಮಾನಸ ಪೂಜಾಸ್ತೋತ್ರ, ಪಂಚಾಕ್ಷರೀಜಪ ನಡೆಯಿತು. ಶ್ರೀ ಮಠದ ಧರ್ಮಖಂಡ ವಿಭಾಗದ ಕೇಶವ ಪ್ರಸಾದ ಭಟ್ ಕೂಟೇಲು ಪ್ರಾರ್ಥನೆಯನ್ನು ನಡೆಸುತ್ತಾ ವಿಭೂತಿ ಎಂದರೆ ಭಗವಂತನ ಗುಣವಿಶೇಷಗಳು, ದೈವೀ ಸಂಪತ್ತು ಎಂಬ ಅರ್ಥವಿದೆ. ವಿಸ್ತಾರವಾದ ಭಗವಂತನ ಅನುಗ್ರಹ ಎಂದು ಭೂತಿ ವಿಭೂತಿಯನ್ನು ವಿವರಿಸಬಹುದಾಗಿದೆ. ವಿಭೂತಿ ಧಾರಣೆ ಎಂದರೆ ಸಾಂಪ್ರದಾಯಿಕವಾಗಿ ಬಂದಂತಹ ಒಂದು ವಿಧಿಯಾಗಿದೆ. ಶರೀರಕ್ಕೆ ಶುದ್ಧಿಯನ್ನು ಹಾಗೂ ಸರ್ವರೀತಿಯ ರಕ್ಷಣೆಯನ್ನು ನೀಡುತ್ತದೆ. ಪರಮೇಶ್ವರನಿಗೆ ಪ್ರಿಯವಾದ ವಿಭೂತಿಯೇ ಆತನಿಗೆ ಭೂಷಣವಾಗಿದೆ. ವಿಭೂತಿ ಎಂದರೆ ಯಜ್ಞದಲ್ಲಿ ಸಮರ್ಪಿಸಿದ ಎಲ್ಲವನ್ನೂ ಭಗವಂತನು ಸ್ವೀಕರಿಸಿ ನಮಗೆ ನೀಡುವ ಪ್ರಸಾದವಾಗಿದೆ. ವಿಭೂತಿಗೆ ಸಂಸ್ಕೃತದಲ್ಲಿ ರಕ್ಷಾ ಎಂಬ ಅರ್ಥವೂ ಇದೆ. ವಿಭೂತಿಯ ಧಾರಣೆಯಿಂದ ದುಷ್ಟಶಕ್ತಿಗಳು ದೂರವಾಗುವುದಲ್ಲದೆ, ನಮ್ಮ ಶರೀರದಲ್ಲಿನ ದುಷ್ಟ ಭಾವನೆಗಳನ್ನು ಹೊಗಲಾಡಿಸುತ್ತದೆ. ಆಯುರ್ವೇದದ ಪ್ರಕಾರ ಶರೀರಕ್ಕೆ ಕಾಂತಿಯನ್ನೂ ನೀಡುತ್ತದೆ. ಸ್ನಾನ ಮಾಡಿ ವಿಭೂತಿ ಧರಿಸುವುದರಿಂದ ಶರೀರಕ್ಕೆ ಶುದ್ಧಿ ಹಾಗೂ ಸರ್ವರೀತಿಯ ರಕ್ಷಣೆಯು ಲಭಿಸುತ್ತದೆ ಎಂದರು. ಗೋಮಯಯಜ್ಞಮಂಗಲ, ಮಂಗಳಾರತಿ, ಪಂಚಾಕ್ಷರೀ ಜಪದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳಿಂದ ಕಾರ್ಯಕರ್ತರು, ಗೋಪ್ರೇಮಿಗಳು ಪಾಲ್ಗೊಂಡಿದ್ದರು.