ಹೊಸದಿಗಂತ ವರದಿ, ಮಡಿಕೇರಿ:
ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲಿ ಆಚರಿಸಲ್ಪಡಲಿರುವ 44ನೇ ವರ್ಷದ ದಸರಾ ಮಹೋತ್ಸವಕ್ಕೆ ಸೋಮವಾರ ಪೂರ್ವಾಹ್ನ ಶ್ರೀ ಚಾಮುಂಡೇಶ್ವರಿಯ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಚಾಲನೆ ನೀಡಲಾಯಿತು.
ಇದಕ್ಕೂ ಮೊದಲು ಅರ್ಚಕ ಶಂಕರ ವೈಲಾಯರ ನೇತೃತ್ವದಲ್ಲಿ ಗಣಪತಿ ಹೋಮ ಹಾಗೂ ಪೂಜಾ ವಿಧಿ ವಿಧಾನಗಳು ನಡೆದವು.
ಶಾಸಕ ಕೆ.ಜಿ ಬೋಪಯ್ಯ ಅವರು ಚಾಮುಂಡೇಶ್ವರಿ ದೇವಿಯ ಮಂಟಪವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು, 44 ವರ್ಷದಿಂದ ಸಾಂಪ್ರದಾಯಿಕವಾಗಿ ಗೋಣಿಕೊಪ್ಪಲುವಿನಲ್ಲಿ ಆಚರಿಸಿಕೊಂಡು ಬರುತ್ತಿರುವ ದಸರಾದಿಂದ ನಾಡಿನ ಜನತೆಗೆ ಒಳಿತಾಗಲಿ. ದೇವಿ ಚಾಮುಂಡೇಶ್ವರಿ ನಾಡಿನ ಜನತೆಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಆಶೀರ್ವಚನ ಮಾಡಿ, ನವ ದುರ್ಗೆಯರ ಆರಾಧನೆ ಬಹಳ ವಿಶೇಷವಾದುದು ಎಂದರಲ್ಲದೆ, ಧರ್ಮವನ್ನು ನಾವು ರಕ್ಷಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ದಸರಾ ಸಮಿತಿಯ, ಅಧ್ಯಕ್ಷ ಬಿ.ಎನ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ನಿಕಟ ಪೂರ್ವ ಅಧ್ಯಕ್ಷರಾದ ರಾಮಕೃಷ್ಣ, ಕುಲ್ಲಚಂಡ ಬೋಪಣ್ಣ, ಕಾರ್ಯಾಧ್ಯಕ್ಷರಾದ ಸಿ.ಕೆ ಬೋಪಣ್ಣ, ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಚೈತ್ರಾ ಚೇತನ್ ಹಾಗೂ ಸದಸ್ಯರು, ಚಾಮುಂಡೇಶ್ವರಿ ಮೂರ್ತಿಯ ದಾನಿಗಳಾದ ಎಂ.ಪಿ. ಕೇಶವ ಕಾಮತ್ ಮತ್ತು ಕುಟುಂಬಸ್ಥರು, ದಸರಾ ಸಮಿತಿ ಸದಸ್ಯರು ಭಾಗವಹಿಸಿದ್ದರು.