ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಆಡಳಿತಕ್ಕೆ ಬಂದ ಕೂಡಲೇ ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜೂನ್ 1 ರಿಂದ ಪೌರ ಕಾರ್ಮಿಕರಿಗೆ ತಿಂಡಿ ಭತ್ಯೆಯಾಗಿ 50 ರೂ. ನೀಡಲು ನಿರ್ಧರಿಸಲಾಗಿದೆ. ನೌಕರರ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ.
ಬಿಬಿಎಂಪಿಯಲ್ಲಿ ಸ್ವಚ್ಚತಾ ಕೆಲಸ ಮಾಡುವ 15.000 ಕ್ಕೂ ಹೆಚ್ಚು ಕಾರ್ಮಿಕರಿಗೆ ಉಪಹಾರ ಭತ್ಯೆ ನೀಡಲಾಗುತ್ತಿದೆ. ಕಾರ್ಮಿಕರಿಗೆ ಪ್ರತಿದಿನ ಬೆಳಗ್ಗೆ ಉಪಹಾರ ಸೇವನೆ ಮಾಡಲು ಪ್ರತಿದಿನ 50 ರೂ ನೀಡಲಾಗುತ್ತಿದ್ದು, ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ತಿಂಗಳಿಗೆ 1500 ರೂ ಕಾರ್ಮಿಕರ ಖಾತೆಗೆ ಜಮಾ ಆಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಮತ್ತು ಕಾಯಂ ಪೌರ ಕಾರ್ಮಿಕರಿಗೆ ಇಸ್ಕಾನ್ ಮೂಲಕ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಉಪಹಾರ ನೀಡಲಾಗುತ್ತಿತ್ತು. ಆದರೆ ತಿಂಡಿ ಗುಣಮಟ್ಟ ಸರಿಯಿಲ್ಲ ಎಂದು ಕಾರ್ಮಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಯೂಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಜೂನ್ 1 ರಿಂದ ಬಿಸಿಯೂಟ ಬಂದ್ ಆಗಲಿದೆ.