ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡುವ ವಿಚಾರಕ್ಕೆ ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಕೆಂಡ ಕಾರಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಉಚಿತ ಗ್ಯಾರೆಂಟಿಗಳ ವಿಚಾರವನ್ನು ದೂರವಿಟ್ಟು ವಿಷಯಾಂತರ ಮಾಡಲು ಆರೆಸ್ಸೆಸ್ ಬ್ಯಾನ್ ಮಾಡುವ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ರು.
ʻನೀವು ಬಿಡಿ..ನಿಮ್ಮಪ್ಪ, ನಿಮ್ಮ ಅಜ್ಜಿ, ಮುತ್ತಾತನಿಗೇ ಆರ್ಎಸ್ಎಸ್ ಬ್ಯಾನ್ ಮಾಡಲು ಆಗಲಿಲ್ಲ. ಸಂಸತ್ತಿನಲ್ಲಿ ಮೆಜಾರಿಟಿ ಇತ್ತು, ಆಗಲೇ ಬೇಳೆ ಬೇಯಲಿಲ್ಲ ಇನ್ನು ಈಗ ಆಗುತ್ತಾ? ನಿಮಗೆ ತಾಕತ್ತಿದ್ದರೆ, ದಮ್ಮಿದ್ರೆ, ಶಕ್ತಿ ಇದ್ರೆ ಬ್ಯಾನ್ ಮಾಡಿ. ನಿಮ್ಮ ಸರಕಾರ ಮೂರು ರಾಜ್ಯಗಳಲ್ಲಿರಬಹುದು ಆದರೆ, ಆರ್ಎಸ್ಎಸ್ನ ಲಕ್ಷಾಂತರ ಶಾಖೆಗಳಿವೆ. ಆರ್ಎಸ್ಎಸ್ ಮತ್ತು ಬಜರಂಗದಳ ಹಿಂದುಗಳ ಧ್ವನಿ. ಹಿಂದುಗಳ ಪರವಾಗಿ ನಿಲ್ಲುವ ಸಾರ್ವಜನಿಕ ಸಂಸ್ಥೆ ಎಂದು ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಗುಡುಗಿದರು.
ಆರೆಸ್ಸೆಸ್ ಬ್ಯಾನ್ ಮಾಡಿದರೆ ನಿಮ್ಮ ಗೂಟದ ಕಾರು ಮೂರು ತಿಂಗಳು ಇರುವುದಿಲ್ಲ. ಅವು ವಿಧಾನಸೌಧದ ಮುಂದೆ ನಿಲ್ಲುತ್ತವೆ ಎಂಬ ಎಚ್ಚರಿಕೆ ನೀಡಿದ್ರು. ಈ ದೇಶದ ಪ್ರಧಾನಿ, ದೇಶದ ಗೃಹ ಸಚಿವರು, ರಾಷ್ಟ್ರಪತಿಗಳೂ ಆರೆಸ್ಸೆಸ್ನವರು ಜೊತೆಗೆ ನಾವೂ ಕೂಡ. ಕಾಂಗ್ರೆಸ್ನವರು ದೇಶವಿರೋಧಿ ಪಿಎಫ್ಐ, ಕೆ.ಎಫ್.ಡಿ. ಹಿಜಾಬ್, ಗೋಹತ್ಯೆ ನಿಷೇಧ ರದ್ದು ಮಾಡುವ ಬೇಡಿಕೆ ಇಟ್ಟ ಅಮ್ನೆಸ್ಟಿ ಇಂಟರ್ನ್ಯಾಶನಲ್ ಪರ ಇರುವವರು. ಇವರನ್ನು ಸಂತುಷ್ಟಗೊಳಿಸಲು ಆರ್ಎಸ್ಎಸ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ ಬದಲಿಗೆ ಬಿಜೆಪಿ ದಿಟ್ಟವಾಗಿ ಎದುರಿಸಲಿದೆ ಎಂದು ತಿಳಿಸಿದರು.