ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಅನೇಕ ವಿಮಾನಗಳ ಸಂಚಾರ ಬಂದ್ ಆಗಿದ್ದು, ಇದರಿಂದ ಅನೇಕ ಭಾರತೀಯರು ನಾನಾ ದೇಶಗಳಲ್ಲಿ ಸಿಲುಕಿಗೊಂಡಿದ್ದು, ಅದೇ ರೀತಿ ಭಾರತದಲ್ಲೂ ಅನೇಕ ವಿದೇಶಿಯರು ಬಾಕಿ ಉಳಿದುಕೊಂಡಿದ್ದಾರೆ.
ಹೀಗಾಗಿ ಕೇಂದ್ರ ಸರಕಾರ, ಭಾರತಕ್ಕೆ ಮರಳಿ ತಮ್ಮ ದೇಶಕ್ಕೆ ಹೋಗಲು ಆಗದೆ ಉಳಿದ ವಿದೇಶಿಯರಿಗೆ 30 ದಿನಗಳ ವೀಸಾ ವಿಸ್ತರಣೆಯನ್ನು ನೀಡುವುದಾಗಿ ತಿಳಿಸಿದೆ . ಜೊತೆಗೆ ವೀಸಾ ಅವಧಿ ಮೀರಿ ಇರುವವರಿಗೆ ಹಾಕುವ ದಂಡವನ್ನು ಕೂಡ ಮನ್ನಾ ಮಾಡುವುದಾಗಿ ತಿಳಿಸಿದೆ.
ಈ ಕುರಿತು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಹಿತಿ ಹಂಚಿಕೊಂಡಿದ್ದು, ಯುದ್ಧ ಸಂಘರ್ಷದಿಂದಾಗಿ ವಿಮಾನಗಳ ಸಂಚಾರ ಸ್ಥಗಿತಗೊಂಡಿದ್ದು, ಹೀಗಾಗಿ ತಾತ್ಕಾಲಿಕ ವಲಸೆ ಪರಿಹಾರದ ಅಡಿಯಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.
ವಿದೇಶಿಗರ ಎಲ್ಲಾ ರೀತಿಯ ಸಾಮಾನ್ಯ ವೀಸಾ ಮತ್ತು ಇ-ವೀಸಾಗಳನ್ನು ಒಂದು ತಿಂಗಳ ಅವಧಿಗೆ ಉಚಿತವಾಗಿ ವಿಸ್ತರಿಸಲಾಗುವುದು. ಅದಕ್ಕಾಗಿ ಆಯಾ ಭಾಗದ ಪ್ರಾದೇಶಿಕ ವಿದೇಶಿಗರ ನೋಂದಣಿ ಕಚೇರಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇನ್ನು ಭಾರತದಲ್ಲಿ ಅವಧಿಗಿಂತ ಹೆಚ್ಚಾಗಿ ಉಳಿದುಗೊಂಡಿರುವ ವಿದೇಶಿಗರಿಗೆ ಯಾವುದೇ ಹೆಚ್ಚುವರಿ ದಂಡ ವಿಧಿಸಲಾಗುವುದಿಲ್ಲ ಎಂದು ತಿಳಿಸಿದೆ. ಅದೇ ರೀತಿ ಮತ್ತೆ ಎಲ್ಲಾ ವಿಮಾನಗಳ ಸಂಚಾರ ಯಥಾಸ್ಥಿತಿ ಶುರುವಾದ ಬಳಿಕ ತಮ್ಮ ದೇಶಕ್ಕೆ ಮರಳಲು ವಿದೇಶಿಗರಿಗೆ ಯಾವುದೇ ರೀತಿಯ ಶುಲ್ಕವಿಲ್ಲದೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.



