ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರಿಗೆ ಸಿಹಿ ಸುದ್ದಿಯೊಂದು ನೀಡಿದೆ. ದೀಪಾವಳಿ ಹಬ್ಬದ ವೇಳೆ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಎಂಆರ್ಪಿ ದರದಲ್ಲಿ ವಿತರಿಸಲು ಮುಂದಾಗಿದೆ.
ದೆಹಲಿಯಲ್ಲಿ ಎಂಆರ್ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳು ಪೂರೈಕೆಗೆ ಕ್ರಮ ಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳನ್ನು ವಾಹನಗಳ ಮೂಲಕ ವಿತರಿಸಲು ಕೇಂದ್ರ ಸರ್ಕಾರ ಚಾಲನೆ ನೀಡಿದೆ. ದೆಹಲಿಯ ಕೃಷಿ ಭವನದಲ್ಲಿ ಇಂದು(ಅಕ್ಟೋಬರ್ 23) ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಕಡಿಮೆ ದರದಲ್ಲಿ ಆಹಾರ ಧಾನ್ಯ ಪೂರೈಕೆ ವಾಹನಕ್ಕೆ ಚಾಲನೆ ನೀಡಿದರು.
ದೆಹಲಿ/ಎನ್ಸಿಆರ್ ನಿವಾಸಿಗಳಿಗಾಗಿ ಭಾರತ್ ಕಡಲೆ ಬೇಳೆ 70 ರೂ. ಕೆಜಿ, ಭಾರತ್ ಹೆಸರುಬೇಳೆ ಮ್ 107 ರೂ. ಕೆಜಿ ಮತ್ತು ಭಾರತ್ ತೊಗರಿಬೇಳೆ 89 ರೂ. ಕೆಜಿ ಬೆಲೆಯಲ್ಲಿ ಮಾರಟ ಮಾಡಲಾಗುತ್ತಿದೆ.ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಕೈಗೊಂಡ ಈ ಯೋಜನೆ ನಾಗರಿಕರ ಮೇಲೆ ಹೆಚ್ಚುತ್ತಿರುವ ಆಹಾರ ಧಾನ್ಯ, ಬೇಳೆ-ಕಾಳು ಬೆಲೆ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವರಾದ ಬಿ.ಎಲ್. ವರ್ಮಾ ಹಾಗೂ ಶ್ರೀಮತಿ ನಿಮುಬೇನ್ ಬಂಭಾನಿಯಾ ಉಪಸ್ಥಿತರಿದ್ದರು.