ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 40ಮಂದಿ ಗಾಯಗೊಂಡಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 40 ಮಂದಿ ಗಾಯಗೊಂಡಿರುವ ಘಟನೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿಯ ಕಾವಾಡಿಯಲ್ಲಿ ನಡೆದಿದೆ.
ಹಾಸನ ಡಿಪೋಗೆ ಸೇರಿದ ಬಸ್ ಕೇರಳ ರಾಜ್ಯದ ಎರ್ನಾಕುಲಂ’ನಿಂದ ಕೊಡಗಿನ ವೀರಾಜಪೇಟೆ ಮೂಲಕ ಹಾಸನಕ್ಕೆ ತೆರಳುತ್ತಿದ್ದ ಬಸ್ ಮಂಗಳವಾರ ಮುಂಜಾನೆ 4.30 ಗಂಟೆಯ ಸುಮಾರಿನಲ್ಲಿ ಕಂದಕಕ್ಕೆ ಉರುಳಿದೆ.
ಚಾಲಕ ಸೇರಿದಂತೆ 40 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ದಟ್ಟ ಮಂಜು ಕವಿದಿದ್ದ ಕಾರಣ ಈ ಅವಘಡ ಸಂಭವಿಸಿರುವುದಾಗಿ ಹೇಳಲಾಗಿದೆ.
ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಮ್ನಿ-ಬೈಕ್ ಡಿಕ್ಕಿ:ಸವಾರ ಸಾವು:
ಮತ್ತೊಂದೆಡೆ ಓಮ್ನಿ ವ್ಯಾನ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಪಾಲಿಬೆಟ್ಟ- ತಿತಿಮತಿ ರಸ್ತೆಯಲ್ಲಿ ನಡೆದಿದೆ.
ಬೈಕ್ ಸವಾರ, ಹುಣಸೂರು ನಿವಾಸಿ ಕೆಂಪನಾಯಕ(35) ಎಂಬವರೇ ಮೃತ ದುರ್ದೈವಿ. ಎರಡು ವಾಹನಗಳು ಡಿಕ್ಕಿಯಾದ ರಭಸಕ್ಕೆ ಕೆಂಪನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.